ADVERTISEMENT

ಶಾಸಕರು ಬಂಡಾಯಕ್ಕೆ ಸಜ್ಜು

ಬಿಹಾರ: ಜೆಡಿಯು ಭಿನ್ನಮತ ತೀವ್ರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2014, 19:30 IST
Last Updated 6 ಜೂನ್ 2014, 19:30 IST

ಪಟ್ನಾ (ಪಿಟಿಐ): ಬಿಹಾರದ ಆಡಳಿತಾರೂಢ ಪಕ್ಷವಾದ ಜೆಡಿ­ಯುದಲ್ಲಿ ಮತ್ತೆ ಭಿನ್ನಮತ ಉಲ್ಬಣ­ಗೊಂಡಿದೆ. ಸಚಿವ ಸಂಪುಟಕ್ಕೆ 14 ಹೊಸ­ಬರ ಸೇರ್ಪಡೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಭಿನ್ನಮತೀಯ ಶಾಸಕರ ನೇತೃತ್ವ ವಹಿಸಿರುವ ಪೂನಂ ದೇವಿ ಅವರ ನಿವಾಸದಲ್ಲಿ ಶುಕ್ರವಾರ ತುರ್ತುಸಭೆ ಸೇರಿದ ಆರಕ್ಕೂ ಹೆಚ್ಚು ಅತೃಪ್ತ ಶಾಸಕರು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್‌ ಕುಮಾರ್‌ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಸಭೆಯ ನಂತರ ಸುದ್ದಿಗಾರ­ರೊಂದಿಗೆ ಮಾತನಾಡಿದ ಪೂನಂ ದೇವಿ,  ನಿತೀಶ್‌ ಕುಮಾರ್‌ ಅವರನ್ನು ಕೆಲವು ದಲ್ಲಾಳಿಗಳು ಸುತ್ತುವರಿ­ದಿದ್ದಾರೆ ಎಂದು ಆರೋಪಿಸಿದರು.

50ಕ್ಕೂ ಹೆಚ್ಚು ಶಾಸಕರು ನಿತೀಶ್‌ ವಿರುದ್ಧ ಬಂಡಾಯ ಏಳಲು ಸಿದ್ಧತೆ ನಡೆಸಿದ್ದಾರೆ ಎಂಬ ಸುಳಿವನ್ನೂ ನೀಡಿದರು. ಅತೃಪ್ತ ಶಾಸಕರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು ಒಂದು ವೇಳೆ ಭಿನ್ನಮತ ಉಲ್ಬಣಗೊಂಡಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುವ ಭೀತಿ ಇದೆ.
 
ಸದ್ಯ 117 ಶಾಸಕರನ್ನು ಹೊಂದಿ­ರುವ ಜೆಡಿಯು ಮೂರು  ರಾಜ್ಯಸಭಾ ಸ್ಥಾನಗಳನ್ನು ಸುಲಭವಾಗಿ ಗೆಲ್ಲಬ­ಹುದು. ಆದರೆ, ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗಿ ಅಡ್ಡಮತವಾದಲ್ಲಿ ಪಕ್ಷ ಮುಜುಗರಕ್ಕೀಡಾಗುವ ಸಾಧ್ಯತೆ ಇದೆ.

ರಾಮ್‌ವಿಲಾಸ್‌ ಪಾಸ್ವಾನ್‌, ರಾಜೀವ್‌ ಪ್ರತಾಪ್‌ ರೂಢಿ ಹಾಗೂ ರಾಮ್‌ಕೃಪಾಲ್‌ ಯಾದವ್‌ ಲೋಕಸಭೆಗೆ ಆಯ್ಕೆಯಾದ ಕಾರಣ ತೆರವಾಗಿರುವ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅವುಗಳಲ್ಲಿ ಒಂದು ಸ್ಥಾನಕ್ಕೆ ಜೆಡಿಯು ಅಧ್ಯಕ್ಷ ಶರದ್‌ ಯಾದವ್‌ ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.