ADVERTISEMENT

ಶ್ರೀನಗರ: ತಿಳಿಯಾಗದ ಉದ್ವಿಗ್ನ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:41 IST
Last Updated 19 ಏಪ್ರಿಲ್ 2015, 19:41 IST
ಶ್ರೀನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತ್ಯೇಕತಾವಾದಿಗಳು
ಶ್ರೀನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತ್ಯೇಕತಾವಾದಿಗಳು   

ಶ್ರೀನಗರ: ಕಾಶ್ಮೀರದಲ್ಲಿ  ಸತತ ಮೂರನೇ ದಿನ ಭಾನುವಾರವೂ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಆದರೆ  ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ಶ್ರೀನಗರ ಪಟ್ಟಣದಲ್ಲಿ ಪರಿಸ್ಥಿತಿ ಬಹುತೇಕ ಶಾಂತಿಯುತವಾಗಿತ್ತು. ಇಲ್ಲಿನ ಮಾರುಕಟ್ಟೆಗಳಿಗೆ ಭಾನುವಾರ ರಜಾ ದಿನ ಆಗಿರುವುದರಿಂದ, ಮಳೆ ಸರಿಯುತ್ತಿದ್ದರಿಂದ ಮತ್ತು ಸಂಭವನೀಯ ಗಲಭೆ  ಭೀತಿಯಿಂದ ನಿವಾಸಿಗಳು ಹೆಚ್ಚಾಗಿ ಮನೆ ಒಳಗೇ ಉಳಿದಿದ್ದರು.

ದಕ್ಷಿಣ ಕಾಶ್ಮೀರದ ತ್ರಾಲ್ ಎಂಬಲ್ಲಿ ಈಚೆಗೆ ನಡೆದ ಎನ್‌ಕೌಂಟರ್‌ನಲ್ಲಿ ಯುವಕನ ಸಾವು, ಕಾಶ್ಮೀರಿ ಪ್ರತ್ಯೇಕತಾವಾದಿ ಮುಖಂಡ ಮಸರತ್ ಆಲಂ ಮರು ಬಂಧನ, ಬುಡ್‌ಗಾಂವ್‌ನ  ನಬರ್ಮಲ್‌ನಲ್ಲಿ ಶನಿವಾರ ಪೊಲೀಸರ ಗುಂಡೇಟಿಗೆ ವಿದ್ಯಾರ್ಥಿ ಬಲಿ– ಇವು ಉದ್ವಿಗ್ನ ಪರಿಸ್ಥಿತಿಗೆ ಕಾರಣಗಳು.

ಹುರಿಯತ್ ಬಣದ ಮಿರ್ವೈಜ್ ಉಮರ್ ಫಾರುಕ್ ಸೇರಿ ಕೆಲವು ಜನ ಪ್ರತ್ಯೇಕತಾವಾದಿ ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ಗೃಹಬಂಧನದಲ್ಲಿ ಇರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಬರ್ಮಲ್ ನಲ್ಲಿ ವಿದ್ಯಾರ್ಥಿಯ ಸಾವಿಗೆ ಸಂಬಂಧಿಸಿದಂತೆ ಒಬ್ಬ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸರನ್ನು ಬಂಧಿಸಿರುವುದು ಜನರನ್ನು ತುಸು ಸಮಾಧಾನಪಡಿಸಿದೆ.

ಮಳೆ: ಶ್ರೀನಗರ ಪಟ್ಟಣ ಸೇರಿದಂತೆ ಕಾಶ್ಮೀರದ ವಿವಿಧೆಡೆ ಭಾನುವಾರ ಇಡೀ ದಿನ ಮಳೆ ಸುರಿಯಿತು.
ಶ್ರೀನಗರದಲ್ಲಿ ಬೆಳಿಗ್ಗೆ ಹದವಾಗಿ ಅರಂಭವಾದ ಮಳೆ ಸಂಜೆಯಾಗುತ್ತಿದ್ದಂತೆ ಮಿಂಚು– ಗುಡುಗು ಸೇರಿ ಬಿರುಸುಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.