ADVERTISEMENT

ಶ್ರೀನಿವಾಸನ್‌ ಮನವಿಗೆ ‘ಸುಪ್ರೀಂ’ ನಕಾರ

​ಪ್ರಜಾವಾಣಿ ವಾರ್ತೆ
Published 22 ಮೇ 2014, 10:10 IST
Last Updated 22 ಮೇ 2014, 10:10 IST

ನವದೆಹಲಿ (ಪಿಟಿಐ): ಐಪಿಎಲ್‌ ಕ್ರಿಕೆಟ್‌ ವ್ಯವಹಾರಗಳನ್ನು ಹೊರತು ಪಡಿಸಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಎನ್‌. ಶ್ರೀನಿವಾಸನ್‌ ಅವರು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ತಳ್ಳಿ ಹಾಕಿದೆ.

ಮತ್ತೊಂದು ಪೀಠ ನೀಡಿದ ಆದೇಶಗಳನ್ನು ಮಾರ್ಪಾಡು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ  ನ್ಯಾಯಮೂರ್ತಿ ಬಿ.ಎಸ್‌.ಚೌಹಾಣ್‌ ಹಾಗೂ ಎ.ಕೆ. ಸಿಕ್ರಿ ಅವರಿದ್ದ ರಜಾ ಕಾಲದ ಪೀಠವು, ಐಪಿಎಲ್‌ ಏಳನೇ ಆವೃತ್ತಿಯೇತರ ಬಿಸಿಸಿಐ  ವ್ಯವಹಾರಗಳನ್ನು ನೋಡಿಕೊಳ್ಳಲು  ಅನುಮತಿ ಕೋರಿದ್ದ ಶ್ರೀನಿವಾಸನ್‌ ಮನವಿಯನ್ನು ಪುರಸ್ಕರಿಸಲಿಲ್ಲ.

‘ಪ್ರಕರಣದಲ್ಲಿ ನೀವು ಪ್ರತಿವಾದಿಯಾಗಿದ್ದಿರಿ. ವಿಚಾರಣೆಯ ವೇಳೆ ನೀವು ಉಪಸ್ಥಿತರಿದ್ದಿರಿ. ಅವು ಏಕಪಕ್ಷೀಯ ಆದೇಶಗಳಾಗಿರಲಿಲ್ಲ.  ನಿಮ್ಮ ಉಪಸ್ಥಿತಿಯಲ್ಲಿಯೇ ಆದೇಶಗಳನ್ನು ಹೊರಡಿಸಲಾಗಿದೆ' ಎಂದು ಹೇಳಿದ ಪೀಠ, ‘ಮತ್ತೊಂದು ಪೀಠ ನೀಡಿದ ಆದೇಶಗಳನ್ನು ಮಾರ್ಪಡಿಸಲು ಇಲ್ಲಿ ಕುಳಿತಿಲ್ಲ’ ಎಂದು ಚಾಟಿ ಬೀಸಿತು.

ADVERTISEMENT

ಇದೇ ವೇಳೆ, ಈ ಹಿಂದೆ ಆದೇಶಗಳನ್ನು ನೀಡಿದ್ದ ಪೀಠಕ್ಕೆ ಮೊರೆ ಹೋಗಬಹುದು ಎಂದು ಶ್ರೀನಿವಾಸನ್‌ ಅವರಿಗೆ ನ್ಯಾಯಾಲಯ ಸೂಚಿಸಿದೆ.

ಮಾರ್ಚ್‌ 28 ಹಾಗೂ ಮೇ 16 ರಂದು ನ್ಯಾಯಾಲಯ ನೀಡಿದ್ದ ಮಧ್ಯಾಂತರ ಆದೇಶಗಳು ಶ್ರೀನಿವಾಸನ್‌  ಅವರಿಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸದಂತೆ ತಡೆಯೊಡ್ಡಿದ್ದವು. ಈ ಆದೇಶಗಳನ್ನು ಮಾರ್ಪಾಡಿಸುವಂತೆ ಕೋರಿ ಅವರು ಸುಪ್ರೀಂನ ರಜಾಕಾಲದ ಪೀಠಕ್ಕೆ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.