ನವದೆಹಲಿ: ತೃತೀಯ ಭಾಷೆಯಾಗಿ ಸಂಸ್ಕೃತ ಬದಲಿಗೆ ಜರ್ಮನ್ ಕಲಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಸ್ಕೃತ ಭಾರತಿ ಸಂಘಟನೆ, ಈ ಬಗ್ಗೆ ಉಂಟಾಗಿರುವ ಗೊಂದಲ ಪರಿಹರಿಸುವ ಪ್ರಯತ್ನ ಮಾಡಿದೆ. ವಿಷಯಕ್ಕೆ ಸಂಬಂಧಿಸಿ ಉದ್ದೇಶಪೂರ್ವಕವಾಗಿ ಗೊಂದಲ ಮೂಡಿಸುವ ಪ್ರಯತ್ನ ನಡೆದಿದೆ ಎಂದು ಸಂಸ್ಥೆ ಹೇಳಿದೆ.
‘ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿಯ ವ್ಯಾಪ್ತಿಯ ಶಾಲೆಗಳಲ್ಲಿ ಕಡ್ಡಾಯವಾಗಿ ಸಂಸ್ಕೃತ ಕಲಿಸಬೇಕು ಎಂದು ಒತ್ತಾಯ ಮಾಡುತ್ತಿಲ್ಲ. ತ್ರಿಭಾಷಾ ಕಲಿಕೆ ಪದ್ಧತಿಯನ್ನು ಅನುಸರಿಸಬೇಕು, ಸಂವಿಧಾನದ 8ನೇ ಪರಿಚ್ಛೇದದ 22 ಭಾಷೆಗಳಲ್ಲಿ ಯಾವುದಾದರೊಂದನ್ನು ಕಲಿಸಬೇಕು ಎಂಬುದಷ್ಟೇ ನಮ್ಮ ಒತ್ತಾಯ’ ಎಂದು ‘ಸಂಸ್ಕೃತ ಭಾರತಿ’ಯ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್ ಹೇಳಿದ್ದಾರೆ.
ಹಾಗಿದ್ದರೂ, ಒಂದರಿಂದ ಹತ್ತನೇ ತರಗತಿವರೆಗೆ ತೃತೀಯ ಭಾಷೆಯಾಗಿ ಸಂಸ್ಕೃತ ಕಲಿಸಲು ಶಾಲೆಗಳು ಆದ್ಯತೆ ನೀಡಬೇಕು. ಈ ಭಾಷೆಯು ಭಾರತದ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಮೌಲ್ಯಗಳನ್ನು ಕಲಿತುಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಕ್ಕಳಿಗೆ ಇದು ನೆರವಾಗುತ್ತದೆ ಎಂದು ಕಾಮತ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.