ADVERTISEMENT

ಸತ್ಯಂ ಬಹುಕೋಟಿ ಹಗರಣ: ನಾಳೆ ತೀರ್ಪು?

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

ಹೈದರಾಬಾದ್‌ (ಪಿಟಿಐ): ಸತ್ಯಂ ಕಂಪ್ಯೂಟರ್‌ ಸರ್ವೀಸ್‌ ಲಿಮಿಟೆಡ್‌ನ (ಎಸ್‌ಸಿಎಸ್‌ಎಲ್‌)   ಬಹುಕೋಟಿ ರೂಪಾಯಿ ಹಗರಣದ ತೀರ್ಪು ಇದೇ 23ಕ್ಕೆ (ಮಂಗಳವಾರ) ಹೊರಬೀಳುವ ಸಾಧ್ಯತೆ ಇದೆ.

ಎಸ್‌ಸಿಎಸ್‌ಎಲ್‌ ಷೇರುದಾರರಿಗೆ ರೂ.14 ಸಾವಿರ ಕೋಟಿ ವಂಚನೆ ಆಗಿದೆ ಎಂದು ಆರೋಪಿಸಲಾಗಿರುವ ಈ ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಸುಮಾರು ಆರು ವರ್ಷಗಳಿಂದ ನಡೆಸುತ್ತಿದೆ.

ಸತ್ಯಂ ಕಂಪ್ಯೂಟರ್ ಕಂಪೆನಿ ಸಂಸ್ಥಾಪಕ ಬಿ.ರಾಮಲಿಂಗರಾಜು, ಮತ್ತವರ ಸೋದರ ಹಾಗೂ ಸತ್ಯಂ ಕಂಪ್ಯೂಟರ್‌ ಕಂಪೆನಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಮರಾಜು, ಮಾಜಿ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್‌, ಮಾಜಿ ನಿರ್ದೇಶಕ­ರಾದ ರಾಮ ಮೈನಾಮಪತಿ ಅವರಿಗೆ ಗಂಭೀರ ಸ್ವರೂಪದ ಹಣಕಾಸು ವಂಚನೆಯ ಒಂದು ಪ್ರಕರಣದಲ್ಲಿ ಡಿ.8ರಂದು ತಲಾ ಆರು ತಿಂಗಳ ಕಾಲ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.

ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲ­ಯದ ಅಂಗಸಂಸ್ಥೆಯಾದ ಗಂಭೀರ ಸ್ವರೂಪದ ಹಣಕಾಸು ವಂಚನೆ ತನಿಖಾ ಇಲಾಖೆ (ಎಸ್‌ಎಫ್­ಐಒ) ಸತ್ಯಂ ಕಂಪ್ಯೂಟರ್‌ ಕಂಪೆನಿ ಹಗರಣದ ಸಂಬಂಧ  ರಾಮಲಿಂಗರಾಜು ಮತ್ತು ಕಂಪೆನಿಯ ನಿರ್ದೇಶಕರು, ಹಿರಿಯ ಅಧಿಕಾರಿಗಳ ವಿರುದ್ಧ ಕಂಪೆನಿ ಕಾಯ್ದೆ ಉಲ್ಲಂಘನೆ ಸಂಬಂಧ ಏಳು ಪ್ರಕರಣಗಳನ್ನು ದಾಖಲಿಸಿದೆ.  ಈ ಪ್ರಕರಣಗಳು ಆರ್ಥಿಕ ಅಪರಾಧ­ಗಳ ವಿಚಾರಣೆಗಾಗಿ ರಚಿಸಲಾಗಿರುವ ವಿಶೇಷ ನ್ಯಾಯಾಲಯದ ಮುಂದಿದೆ.

ಸಿಬಿಐ ತನಿಖೆ ನಡೆಸಿರುವ ರೂ.14 ಸಾವಿರ ಕೋಟಿ ಹಗರಣದ ವಿಚಾರಣೆಯು ಕಳೆದ ಅಕ್ಟೋಬರ್‌ 30ರಂದು ನಡೆದಿತ್ತು. ನ್ಯಾಯಾಧೀಶ ಬಿವಿಎಲ್‌ಎನ್‌ ಚಕ್ರವರ್ತಿ ಅವರು ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 23ಕ್ಕೆ ಮುಂದೂಡಿದರು. ‘ಬಹುಶಃ 23ರಂದೇ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ’ ಎಂದು ಸಿಬಿಐನ ವಿಶೇಷ ಪ್ರಾಸಿಕ್ಯೂಟರ್‌ ಕೆ.ಸುರೇಂದರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.