ನವದೆಹಲಿ (ಪಿಟಿಐ): ದೇಶದ ಎಲ್ಲಾ ನಾಗರಿಕರಿಗೆ ‘ಸಮಾನರೂಪದ ಅಂತರ್ಜಾಲ ದಕ್ಕುವಂತೆ’ ಮಾಡುವುದಾಗಿ ಸರ್ಕಾರವು ಮಂಗಳವಾರ ಭರವಸೆ ನೀಡಿದೆ.
ಮುಕ್ತ ಅಂತರ್ಜಾಲದ ಸಂಬಂಧ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಪತ್ರವ್ಯವಹಾರ ಹುಟ್ಟುಹಾಕಿರುವ ವಿವಾದ ಸಂಬಂಧ ರಾಜ್ಯಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಸರ್ಕಾರವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ಸರ್ಕಾರ ಈ ಭರವಸೆ ನೀಡಿದೆ.
‘ದೇಶದ ಎಲ್ಲಾ ನಾಗರಿಕರಿಗೆ ತಾರತಮ್ಯ ರಹಿತ ಅಂತರ್ಜಾಲ ಲಭ್ಯತೆಯನ್ನು ಖಚಿತಪಡಿಸಲು ಸರ್ಕಾರ ಸಿದ್ಧವಾಗಿದೆ.
ಮುಕ್ತ ಅಂತರ್ಜಾಲ ಕಲ್ಪನೆ ಹಾಗೂ ತತ್ವಗಳಿಗೆ ಸರ್ಕಾರ ಬದ್ಧವಾಗಿದ್ದು, ಯಾವುದೇ ತಾರತಮ್ಯ ಇಲ್ಲದಂತೆ ಎಲ್ಲರಿಗೂ ಅಂತರ್ಜಾಲ ದೊರಕಿಸಲಿದೆ’ ಎಂದು ಮಾಹಿತಿ ಮತ್ತು ತಂತ್ರಜ್ಙಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ಗಮನ ಸೆಳೆಯುವ ನಿಲುವಳಿ ಸೂಚನೆ ವೇಳೆ ಸದನಕ್ಕೆ ತಿಳಿಸಿದರು.
‘ಅಂತರ್ಜಾಲ ಸಂಪರ್ಕ ಯಾವುದೇ ಅಡ್ಡಿಯಿಲ್ಲದೇ ಮುಂದುವರಿಯಲಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಪರಿಗಣಿಸುವಾಗ ಮುಕ್ತ ಅಂತರ್ಜಾಲದ ಪ್ರಮುಖ ನೀತಿಗಳನ್ನು ಸರ್ಕಾರ ಪಾಲಿಸಲಿದೆ ಎಂದು ನಾನು ಈ ಸದನಕ್ಕೆ ಭರವಸೆ ನೀಡುವೆ’ ಎಂದು ಅವರು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.