ನವದೆಹಲಿ : ಸಾವಯವ ಕೃಷಿಯಲ್ಲಿ ಗೋಮೂತ್ರವನ್ನು ಯಾವ ರೀತಿಯಲ್ಲಿ ಬಳಕೆ ಮಾಡಬಹುದು ಎಂಬ ಬಗ್ಗೆ ಸಂಶೋಧನೆ ನಡೆಸುವಂತೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ (ಐಸಿಎಆರ್) ಸೂಚಿಸಲಾಗಿದೆ. ಸಂಶೋಧನೆಯ ವರದಿಯನ್ನು ಎರಡು ತಿಂಗಳಲ್ಲಿ ಐಸಿಎಆರ್ ಸಲ್ಲಿಸಲಿದೆ.
ಗೋಮೂತ್ರವನ್ನು ಅಮಿನೊ ಆಮ್ಲವಾಗಿ ಪರಿವರ್ತಿಸಲು ಸಾಧ್ಯವಿದೆಯೇ ಎಂಬುದನ್ನು ಐಸಿಎಆರ್ ಪರಿಶೀಲಿಸಲಿದೆ. ಅಮಿನೊ ಆಮ್ಲಕ್ಕೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಶಕ್ತಿ ಇದೆ.
ನೀತಿ ಆಯೋಗದಲ್ಲಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಗೋಮೂತ್ರದ ಬಗ್ಗೆ ಸಂಶೋಧನೆ ನಡೆಸುವಂತೆ ಐಸಿಎಆರ್ ಅನ್ನು ಕೋರಲು ನಿರ್ಧರಿಸಲಾಯಿತು. ಕೇಂದ್ರದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಗಿರಿರಾಜ್ ಕಿಶೋರ್ ಸಭೆಯಲ್ಲಿ ಭಾಗವಹಿಸಿದ್ದರು. ಸಾವಯವ ಕೃಷಿಯಲ್ಲಿ ಗೋಮೂತ್ರ ಮತ್ತು ಸೆಗಣಿ ಬಳಕೆಯ ಬಗ್ಗೆ ಸಂಶೋಧನೆ ಅಗತ್ಯ ಎಂದು ಅವರು ಹೇಳಿದ್ದರು.
ಗಿರಿರಾಜ್ ಸಿಂಗ್ ಅವರು ಬಿಹಾರದಲ್ಲಿ ಸಾವಯವ ಕೃಷಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹಾಗಾಗಿ ನೀತಿ ಆಯೋಗವು ಸಿಂಗ್ ಅವರ ಜತೆ ಸಮಾಲೋಚನೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರೂ ಹಲವು ಬಾರಿ ಹೇಳಿದ್ದರು ಎಂದು ನೀತಿ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಸಾಯನಿಕದಿಂದ ಕೂಡಿದ ಕೃತಕ ರಸಗೊಬ್ಬರಗಳಿಗೆ ಗೋಮೂತ್ರವು ಅತ್ಯುತ್ತಮ ಪರ್ಯಾಯ. ಇದು ಭೂಮಿಯ ಫಲವತ್ತತೆಯನ್ನು ನಾಲ್ಕರಿಂದ ಐದು ಪಟ್ಟು ಹೆಚ್ಚಿಸುತ್ತದೆ ಎಂದು ಸಿಂಗ್ ಪ್ರತಿಪಾದಿಸಿದ್ದಾರೆ.
ಸಾವಯವ ಕೃಷಿ ಇನ್ನಷ್ಟು ಹೆಚ್ಚಬೇಕು ಎಂಬುದು ಸರ್ಕಾರದ ಉದ್ದೇಶ. ಅದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ. 2016ರಲ್ಲಿ ಸಿಕ್ಕಿಂ ಅನ್ನು ದೇಶದ ಮೊದಲ ಸಂಪೂರ್ಣ ಸಾವಯವ ರಾಜ್ಯ ಎಂದು ಘೋಷಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.