ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಹಿಮಕುಸಿತ ಘಟನೆಗಳಲ್ಲಿ 10 ಯೋಧರು ಮೃತಪಟ್ಟಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿಯ ಬಂಡಿಪೋರಾ ಜಿಲ್ಲೆಯ ಗುರೆಜ್ ವಲಯದಲ್ಲಿ ಬುಧವಾರ ರಾತ್ರಿ ಸೇನಾ ಶಿಬಿರದ ಮೇಲೆ ಭಾರಿ ಹಿಮ ಕುಸಿದಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಪ್ರತಿಕೂಲ ಹವಾಮಾನ ಲೆಕ್ಕಿಸದೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಕಿರಿಯ ಅಧಿಕಾರಿ ಸೇರಿದಂತೆ ಏಳು ಯೋಧರನ್ನು ರಕ್ಷಿಸಲಾಗಿದೆ. ಮೂವರ ಮೃತದೇಹಗಳು ಗುರುವಾರ ಬೆಳಿಗ್ಗೆ ಪತ್ತೆಯಾಯಿತು’ ಎಂದಿದ್ದಾರೆ. ‘ಗುರೆಜ್ ವಲಯದಲ್ಲಿ ಬುಧವಾರ ಸಂಜೆ ಮತ್ತೊಂದು ಹಿಮಕುಸಿತ ಸಂಭವಿಸಿದೆ. ನಿಯಮಿತ ಗಸ್ತು ಕಾರ್ಯದ ಬಳಿಕ ಗಡಿ ಠಾಣೆಗೆ ಮರಳುತ್ತಿದ್ದ ಯೋಧರ ತಂಡ ಹಿಮದಡಿ ಸಿಲುಕಿದೆ. ರಕ್ಷಣಾ ಕಾರ್ಯಕರ್ತರು ಇದುವರೆಗೆ ಏಳು ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದಾರೆ’ ಎಂದು ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಹಿಮಕುಸಿತದ ಅಪಾಯವಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.