ADVERTISEMENT

‘ಮಗನನ್ನು ಭಯೋತ್ಪಾದಕ ಎಂದು ಕರೆಯಬೇಡಿ: ಕನ್ಹಯ್ಯಾ ತಾಯಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2016, 10:11 IST
Last Updated 14 ಫೆಬ್ರುವರಿ 2016, 10:11 IST
‘ಮಗನನ್ನು ಭಯೋತ್ಪಾದಕ ಎಂದು ಕರೆಯಬೇಡಿ: ಕನ್ಹಯ್ಯಾ  ತಾಯಿ
‘ಮಗನನ್ನು ಭಯೋತ್ಪಾದಕ ಎಂದು ಕರೆಯಬೇಡಿ: ಕನ್ಹಯ್ಯಾ ತಾಯಿ   

ಪಟ್ನಾ (ಪಿಟಿಐ): ‘ದಯವಿಟ್ಟು ನನ್ನ ಮಗನನ್ನು ಭಯೋತ್ಪಾದಕ ಎಂದು ಕರೆಯಬೇಡಿ.’ ಇದು ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಕಾರ್ಯಕ್ರಮ ನಡೆಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಅವರ ತಾಯಿಯ ಮನವಿ.

‘ನನ್ನ ಮಗನಿಗೆ ಪೊಲೀಸರು ತುಂಬಾ ಹೊಡೆದಿಲ್ಲ ಎಂದು ಭಾವಿಸುತ್ತೇನೆ. ಆತನ ಬಂಧನದ ನಂತರದ ಪ್ರತಿ ಬೆಳವಣಿಗೆಗಳನ್ನು ಟಿವಿಯಲ್ಲಿ ನೋಡುತ್ತಿದ್ದೇನೆ. ದಯವಿಟ್ಟು ಆತನನ್ನು ಭಯೋತ್ಪಾದಕ ಎಂದು ಮಾತ್ರ ಕರೆಯಬೇಡಿ. ಕನ್ಹಯ್ಯಾ ಎಂದೂ ನಮಗೆ (ಪಾಲಕರಿಗೆ) ಅಗೌರವ ತೋರಿಲ್ಲ. ದೇಶದ್ರೋಹದ ಕೆಲಸವನ್ನೂ ಆತ ಮಾಡಿಲ್ಲ’ ಎಂದು ತಾಯಿ ಮೀನಾ ದೇವಿ  ಬಿಹಾರದ ಬೆಗುಸಾರಿ ಜಿಲ್ಲೆಯ ಗ್ರಾಮದಿಂದ  ಪಿಟಿಐ ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದಾಳೆ.

ಅಂಗನವಾಡಿ ಸಹಾಯಕಿಯಾಗಿರುವ ಮೀನಾ ದೇವಿ, ಮಗನ ಬಂಧನದ ಸುದ್ದಿಯನ್ನು  ನೆರೆಮನೆಯ ಟಿವಿಯಲ್ಲಿ ನೋಡಿ ತಿಳಿದುಕೊಂಡಿದ್ದಾರೆ. ಆಕೆಯ ತಿಂಗಳ ಸಂಪಾದನೆ ₹3,500. ಕನ್ಹಯ್ಯಾ ಅವರ ಸಹೋದರ ಮಣಿಕಾಂತನೇ ಕುಟುಂಬಕ್ಕೆ ಏಕೈಕ ಆಸರೆ.  ಮೀನಾ ದೇವಿಯ ಪತಿ ಪಾರ್ಶ್ವವಾಯುವಿನಿಂದ ಕಳೆದ 7 ವರ್ಷಗಳಿಂದ  ಹಾಸಿಗೆ ಹಿಡಿದಿದ್ದಾರೆ.

‘ನನ್ನ ಮಗ ಬಿಜೆಪಿ ವಿರುದ್ಧದ ಹಲವು ಚಳವಳಿಗಳಲ್ಲಿ ಪಾಲ್ಗೊಂಡಿದ್ದ. ಆತನ ಬಂಧನಕ್ಕೆ ಹಿಂದುತ್ವ ರಾಜಕಾರಣವೇ ಕಾರಣ’ ಎಂದು ಕನ್ಹಯ್ಯಾ ಅವರ ತಂದೆ ಜೈಶಂಕರ್‌  ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.