ADVERTISEMENT

‘ಯಾಕೂಬ್‌ ಪತ್ನಿಯನ್ನು ರಾಜ್ಯಸಭೆಗೆ ಕಳಿಸಿ’

ವಿವಾದ ಸೃಷ್ಟಿಸಿದ ಎಸ್‌ಪಿ ಮುಖಂಡ ಘೋಸಿ ಪತ್ರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 6:59 IST
Last Updated 1 ಆಗಸ್ಟ್ 2015, 6:59 IST

ಮುಂಬೈ (ಪಿಟಿಐ): ಗಲ್ಲು ಶಿಕ್ಷೆಗೆ ಗುರಿಯಾದ ಯಾಕೂಬ್‌ ಮೆಮನ್‌ ಪತ್ನಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಬೇಕೆಂದು ಸಮಾಜವಾದಿ ಪಕ್ಷದ ಮುಖಂಡ ಮಹಮ್ಮದ್‌ ಫಾರೂಕ್‌ ಘೋಸಿ ತಮ್ಮ ಪಕ್ಷದ ನಾಯಕ ಮುಲಾಯಂ ಸಿಂಗ್‌ ಯಾದವ್‌ ಅವರಿಗೆ ಪತ್ರದ ಮೂಲಕ ಮನವಿ ಮಾಡಿರುವುದು ಈಗ ವಿವಾದ ಸೃಷ್ಟಿಸಿದೆ.

ಪತಿಯ ಮರಣದ ಬಳಿಕ ‘ಅಸಹಾಯಕ’ರಾಗಿರುವ ಯಾಕೂಬ್‌ ಪತ್ನಿ ರಹೀನ್‌ ಅವರಿಗೆ ರಾಜ್ಯಸಭೆಯ ಸದಸ್ಯತ್ವ ಸಿಗಬೇಕು ಎಂದು ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷರಾಗಿರುವ ಘೋಸಿ ಪತ್ರದಲ್ಲಿ ಹೇಳಿದ್ದಾರೆ.

‘ರಹೀನ್‌ ಸಾಕಷ್ಟು ವರ್ಷ ಕಾರಾಗೃಹದಲ್ಲಿ ಯಾತನೆಯ ಬದುಕು ಕಳೆದಿದ್ದಾರೆ. ರಹೀನ್‌ ಅವರಂತೆಯೇ ದೇಶದ ಅದೆಷ್ಟೋ ಮುಸ್ಲಿಂ ಮಹಿಳೆಯರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಇಂಥ ಅಸಹಾಯಕ ಮಹಿಳೆಯರ ಪರವಾಗಿ ದನಿ ಎತ್ತಲು ರಹೀನ್‌ ಅವರನ್ನು ರಾಜ್ಯಸಭೆಗೆ ಕಳಿಸಬೇಕಿದೆ’ ಎಂದು ಮುಲಾಯಂ ಸಿಂಗ್‌ ಅವರಿಗೆ ಬರೆದಿರುವ ಪತ್ರದಲ್ಲಿ ಘೋಸಿ ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಮಾಧವ ಭಂಡಾರಿ, ಎಸ್‌ಪಿ ಯಾವ ರೀತಿ ಮತಬ್ಯಾಂಕ್‌ ರಾಜಕಾರಣ ಮಾಡುತ್ತಿದೆ ಎಂಬುದು ಘೋಸಿ ಪತ್ರದ ಮೂಲಕ ಬಹಿರಂಗಗೊಂಡಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.