ADVERTISEMENT

‘ಶೌಚಾಲಯ ಕಟ್ಟಿಸದಿದ್ದಕೆ ಯುವತಿ ಆತ್ಮಹತ್ಯೆ’

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 9:40 IST
Last Updated 4 ಜುಲೈ 2015, 9:40 IST

ದುಮ್ಕಾ, ಜಾರ್ಖಂಡ್‌ (ಪಿಟಿಐ): ಪ್ರೇಮ ವೈಫಲ್ಯ, ಅನಾರೋಗ್ಯ, ಪೋಷಕರ ಕಿರುಕುಳ ಇತ್ಯಾದಿ ಕಾರಣಗಳಿಗೆ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನಾವು ಕೇಳಿರುತ್ತೇವೆ. ಆದರೆ ಪೋಷಕರು ಶೌಚಾಲಯ ಕಟ್ಟಿಸಲಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ವರದಿಯಾಗಿದೆ.

ಹೌದು, ಈ ಘಟನೆ ಭಾರತ ಸರ್ಕಾರದ ‘ಸ್ವಚ್ಛ ಅಭಿಯಾನ’ ಯೋಜನೆಯ ವೈಫಲ್ಯವನ್ನು ಎತ್ತಿತೋರಿಸುತ್ತದೆ.

ದುಮ್ಕಾ ಪಟ್ಟಣದ ನಿವಾಸಿ ಖೂಬು ಕುಮಾರಿ ಆತ್ಮಹತ್ಯೆಗೆ ಶರಣಾದ ನತದೃಷ್ಟ ಯುವತಿ. ಮಗಳು ಶೌಚಾಲಯ ಕಟ್ಟಿಸುವಂತೆ ನಮ್ಮ ಬಳಿ ಹಲವು ಸಲ ಹೇಳುತ್ತಿದ್ದಳು ಎಂದು ಖೂಬೂ ಕುಮಾರಿ ತಾಯಿ ಸಂಜು ದೇವಿ ತಿಳಿಸಿದ್ದಾರೆ.

ಹಣಕಾಸು ಮುಗ್ಗಟ್ಟಿನಿಂದ ನಾವು ಶೌಚಾಲಯ ಕಟ್ಟಿಸಲಾಗಲಿಲ್ಲ. ಬಯಲು ಶೌಚಕ್ಕೆ ಹೋಗುವುದಕ್ಕೆ ನಮ್ಮ ಮಗಳು ಮುಜುಗರ ಪಟ್ಟುಕೊಳ್ಳುತ್ತಿದ್ದಳು. ನಾವು  ಅವಳ ಮದುವೆಯ ವೇಳೆಗೆ ಶೌಚಾಲಯ ನಿರ್ಮಿಸಲು ನಿರ್ಧರಿಸಿದ್ದೆವು ಎಂದು ಸಂಜು ದೇವಿ ಘಟನೆ ಸಂಬಂಧ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಖೂಬೂ ಕುಮಾರಿ ತಂದೆ ಲಾರಿ ಚಾಲಕ. ತಾಯಿ ಮನೆ ಕೆಲಸ ಮಾಡುತ್ತಿದ್ದಾರೆ. ಯುವತಿ ಆತ್ಮಹತ್ಯೆ ಮಾಡಿಕೊಂಡಾಗ ಮನೆಯಲ್ಲಿ ಯಾರು ಇರಲಿಲ್ಲ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆ ಗ್ರಾಮೀಣ ಮಹಿಳೆಯರ ನಿತ್ಯದ ನರಕ ಯಾತನೆಯನ್ನು ಅನಾವರಣಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT