ADVERTISEMENT

‘ಸರಪಂಚ್‌ಪತಿ ವ್ಯವಸ್ಥೆ ಕೊನೆಗಾಣಬೇಕು’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 11:52 IST
Last Updated 24 ಏಪ್ರಿಲ್ 2015, 11:52 IST

ನವದೆಹಲಿ (ಪಿಟಿಐ): ಗ್ರಾಮ ಪಂಚಾಯತಿಗಳಿಗೆ ಆಯ್ಕೆಯಾದ ಮಹಿಳಾ ಜನಪ್ರತಿನಿಧಿಯ ಬದಲಿಗೆ ಅವರ ಪತಿಯು ಆಡಳಿತದಲ್ಲಿ ಪ್ರಭಾವ ಬೀರುವ ‘ಸರಪಂಚ್‌ಪತಿ’ ವ್ಯವಸ್ಥೆ ಕೊನೆಗಾಣಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಶುಕ್ರವಾರ ನಡೆದ ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ಮಹಿಳಾ ಸಬಲೀಕರಣಕ್ಕೆ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಆದರೆ, ಅವರ ಹಕ್ಕು ಮತ್ತು ಅವಕಾಶಗಳನ್ನು ಅವರ ಪತಿ ಕಸಿದುಕೊಳ್ಳುವುದು ನಡೆದಿದೆ. ಈ ವ್ಯವಸ್ಥೆ ಕೊನೆಯಾಗಬೇಕು. ಮಹಿಳೆಯರಿಗೂ ಆಡಳಿತ ಅವಕಾಶ ಲಭಿಸಬೇಕು’ ಎಂದು ಮೋದಿ ತಿಳಿಸಿದ್ದಾರೆ.
 
ಮಹಾತ್ಮ ಗಾಂಧಿ ಅವರ ಮಾತುಗಳನ್ನು ಉಲ್ಲೇಖಿಸಿದ ಪ್ರಧಾನಿ, ‘ಭಾರತ ಹಳ್ಳಿಗಳ ದೇಶ. ನಮ್ಮ ಹಳ್ಳಿಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಪಂಚಾಯತ್‌ ಜನಪ್ರತಿನಿಧಿಗಳು ಯೋಚಿಸಬೇಕು. ಕೆಲವು ಕುಗ್ರಾಮಗಳಲ್ಲಿ ಈಗಲೂ ಸಮಸ್ಯೆಗಳು ಹೆಚ್ಚಾಗಿವೆ. ಆದರೆ, ಅಲ್ಲಿನ ಜನರ ಕನಸುಗಳು ದೊಡ್ಡದಾಗಿವೆ. ಮುಂದಿನ ಐದು ವರ್ಷಗಳಲ್ಲಿ ಹಳ್ಳಿಗಳಲ್ಲಿ ಏನು ಅಭಿವೃದ್ಧಿಯಾಗಬೇಕು ಎಂಬ ದೂರದರ್ಶಿತ್ವ ಪಂಚಾಯತ್‌ ವ್ಯವಸ್ಥೆಯ ಜನಪ್ರತಿನಿಧಿಗಳಲ್ಲಿ ಮೂಡಬೇಕು’ ಎಂದಿದ್ದಾರೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಂಪೂರ್ಣ ಮಹಿಳಾ ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ್‌ ಒಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸರಪಂಚ್ ಹೇಳಿದ ಮಾತನ್ನು  ಪ್ರಧಾನಿ ನೆನಪಿಸಿಕೊಂಡರು. ‘ಗ್ರಾಮದಲ್ಲಿ ಬಡತನ ನಿರ್ಮೂಲನೆ ಮಾಡುವುದೇ ನನ್ನ ಧ್ಯೇಯ’ ಎಂದು ಅಲ್ಲಿನ ಸರಪಂಚ್‌ ಹೇಳಿದ್ದರು ಎಂದು ಮೋದಿ ತಿಳಿಸಿದ್ದಾರೆ.

ADVERTISEMENT

‘ವರ್ಷದಲ್ಲಿ ಒಂದು ಗ್ರಾಮದಿಂದ ಐದು ಮಂದಿಯನ್ನು ಬಡತನದಿಂದ ಮೇಲೆತ್ತಿದರೆ ಮುಂದೊಂದು ದಿನ ದೇಶದಲ್ಲಿ ಬಡತನವೇ ಇಲ್ಲವಾಗುತ್ತದೆ. ದೇಶದಲ್ಲಿ ದೊಡ್ಡ ಬದಲಾವಣೆ ಕಂಡು ಬರುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.