ನವದೆಹಲಿ (ಪಿಟಿಐ/ಐಎಎನ್ಎಸ್): ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ ನಡೆದ ಸಿಖ್ ಹತ್ಯಾಕಾಂಡವನ್ನು ‘ದೇಶದ ಏಕತೆಗೆ ಆದ ಕತ್ತಿಯ ಇರಿತ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ೧೩೯ನೇ ಜನ್ಮವರ್ಷಾಚರಣೆಯನ್ನು ದೇಶದಾದ್ಯಂತ ಶುಕ್ರವಾರ ‘ರಾಷ್ಟ್ರೀಯ ಏಕತಾ ಓಟ’ವನ್ನಾಗಿ ಆಚರಿಸಿದ ಸಂದರ್ಭದಲ್ಲಿ ಮೋದಿ ಅವರು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಈ ರೀತಿ ಚಾಟಿ ಬೀಸಿದರು. ಆದರೆ, ಇಂದಿರಾ ಹತ್ಯೆ ನಂತರ ನಡೆದ ಸಾವಿರಾರು ಸಿಖ್ಖರ ಹತ್ಯೆ ಘಟನೆಯನ್ನು ಅವರು ಎಲ್ಲಿಯೂ ನೇರವಾಗಿ ಉಲ್ಲೇಖಿಸಲಿಲ್ಲ.
‘ಇಂದು ಇಂದಿರಾ ಗಾಂಧಿ ಪುಣ್ಯತಿಥಿ ಕೂಡ ಹೌದು’ ಎಂದಷ್ಟೇ ಹೇಳಿದ ಮೋದಿ ಆ ಬಗ್ಗೆ ಹೆಚ್ಚಿಗೆ ಏನನ್ನೂ ಮಾತನಾಡಿಲ್ಲ.
‘೩೦ ವರ್ಷಗಳ ಹಿಂದೆ ನಮ್ಮವರೇ ಆದ ಜನ ಹತ್ಯೆಯಾದರು. ದೇಶದ ಏಕತೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ‘ಉಕ್ಕಿನ ಮನುಷ್ಯ’ನ ಜನ್ಮದಿನದಂದೇ ಇಂಥ ಕರಾಳ ಘಟನೆ ನಡೆದಿತ್ತು ಎನ್ನುವುದು ದುರದೃಷ್ಟಕರ’ ಎಂದರು. ‘ಅದು ಒಂದು ಸಮುದಾಯದ ಮೇಲೆ ನಡೆದ ಆಕ್ರಮಣವಾಗಿರಲಿಲ್ಲ.
ಭಾರತದ ಎದೆಯನ್ನೇ ಬಾಕುವಿನಿಂದ ಇರಿದಂತಾಗಿತ್ತು’ ಎಂದೂ ಮೋದಿ ಹೇಳಿದರು. ಪಟೇಲ್ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಹಮ್ಮಿಕೊಂಡ ‘ಏಕತೆಗಾಗಿ ಓಟ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ‘ರಾಜಕೀಯ ಬದುಕಿನಲ್ಲಿ ಎದುರಾದ ಅಡೆತಡೆಗಳ ನಡುವೆಯೂ ಪಟೇಲ್ ಅವರು ರಾಷ್ಟ್ರೀಯ ಏಕತೆಯ ಆಶಯದಿಂದ ಹಿಂದೆ ಸರಿದಿರಲಿಲ್ಲ’ ಎಂದರು.
ದೇಶದ ಸಮಗ್ರತೆ ಹಾಗೂ ಏಕತೆಗೆ ಪಟೇಲ್ ಕಾಣಿಕೆಯನ್ನು ನೆನಪಿಸಿಕೊಂಡ ಮೋದಿ, ‘ ಇತಿಹಾಸವನ್ನು ಉಪೇಕ್ಷಿಸುವ ದೇಶವು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎನ್ನುವುದನ್ನು ನಾವು ಮರೆಯಕೂಡದು. ಸಿದ್ಧಾಂತದ ಸೀಮಿತ ಚೌಕಟ್ಟಿಗೆ ಕಟ್ಟುಬಿದ್ದು ಇತಿಹಾಸ ಹಾಗೂ ಪರಂಪರೆಯನ್ನು ಛಿದ್ರಗೊಳಿಸುವ ಕೆಲಸ ಮಾಡಬಾರದು’ ಎಂದು ಕರೆ ನೀಡಿದರು.
ಸ್ವಾತಂತ್ರ್ಯ ಚಳವಳಿಗೆ ಪಟೇಲ್ ನೀಡಿದ್ದ ಕೊಡುಗೆಗಳನ್ನು ಉಲ್ಲೇಖಿಸಿದ ಮೋದಿ, ‘ಐತಿಹಾಸಿಕ ದಂಡಿ ಯಾತ್ರೆ ರೂಪಿಸುವ ಹೊಣೆಗಾರಿಕೆಯನ್ನು ಮಹಾತ್ಮ ಗಾಂಧಿ ಅವರು ಪಟೇಲ್ ಅವರಿಗೆ ವಹಿಸಿದ್ದರು. ಇದನ್ನು ಪಟೇಲ್ ಯಶಸ್ವಿಯಾಗಿ ನಿಭಾಯಿಸಿದ್ದರು’ ಎಂದು ಮೆಲುಕು ಹಾಕಿದರು. ‘ಸ್ವಾಮಿ ವಿವೇಕಾನಂದರನ್ನು ಬಿಟ್ಟು ರಾಮಕೃಷ್ಣ ಪರಮಹಂಸರನ್ನು ಕಲ್ಪಿಸಿಕೊಳ್ಳಲಾಗದು. ಹಾಗೆಯೇ ಪಟೇಲ್ ಅವರಿಲ್ಲದೇ ಮಹಾತ್ಮ ಗಾಂಧಿ ಅವರನ್ನು ಕಲ್ಪಿಸಿಕೊಳ್ಳಲಾಗದು’ ಎಂದರು.
ಪಟೇಲ್ ಅವರನ್ನು ಚಾಣಕ್ಯನಿಗೆ ಹೋಲಿಸಿದ ಅವರು, ‘ಶತ ಶತಮಾನಗಳ ಹಿಂದೆ ಸಣ್ಣ ರಾಜ್ಯಗಳನ್ನು ಒಂದುಗೂಡಿಸಿ ಬಲಿಷ್ಠ ಸಾಮ್ರಾಜ್ಯ ನಿರ್ಮಿಸುವ ಪ್ರಯೋಗದಲ್ಲಿ ಚಾಣಕ್ಯ ಯಶ ಕಂಡಿದ್ದ. ಸ್ವಾತಂತ್ರ್ಯ ಬಂದ ಬಳಿಕ ಪಟೇಲ್ ಕೂಡ ಇದೇ ಕೆಲಸ ಮಾಡಿದರು. ತಮ್ಮ ದೇಶಪ್ರೇಮ, ಕೌಶಲ ಹಾಗೂ ಕಲ್ಪನೆಯ ಮೂಲಕ ಈ ದೇಶವನ್ನು ಒಗ್ಗೂಡಿಸಿದರು’ ಎಂದು ಬಣ್ಣಿಸಿದರು.
‘ಏಕತೆಗಾಗಿ ಓಟ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ, ರಾಜ್ಪಥ್ನಲ್ಲಿ ಸ್ವಲ್ಪ ದೂರ ಬಿರುಸಿನ ಹೆಜ್ಜೆಗಳನ್ನು ಹಾಕಿ ನಡೆದರು.
ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಕ್ರೀಡಾಪಟುಗಳಾದ ಸುಶೀಲ್ ಕುಮಾರ್, ವಿಜೇಂದ್ರ ಸಿಂಗ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
‘ಏಕತೆಗಾಗಿ ಓಟ’ದಲ್ಲಿ ಭಾಗವಹಿಸಿದವರಿಗೆ ಮೋದಿ ಅವರು ಏಕತೆಯ ಪ್ರತಿಜ್ಞೆ ಬೋಧಿಸಿದರು. ನಂತರ, ಪಟೇಲ್ ಚೌಕದಲ್ಲಿರುವ ಸರ್ದಾರ್್ ಪಟೇಲ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಮಹಾತ್ಮ ಗಾಂಧಿ ಹಾಗೂ ಪಟೇಲ್ ಅವರ ಜನ್ಮದಿನ ಮತ್ತು ಪುಣ್ಯತಿಥಿಯನ್ನು ಮಾತ್ರ ಆಚರಿಸಲು ಇತ್ತೀಚೆಗೆ ಎನ್ಡಿಎ ಸರ್ಕಾರ ನಿರ್ಧರಿಸಿತ್ತು. ಇತರ ಮುಖಂಡರ ಸ್ಮರಣೆ ಕಾರ್ಯಕ್ರಮವನ್ನು ಸಂಬಂಧಿಸಿದ ಟ್ರಸ್ಟ್ಗಳು ಆಚರಿಸಬಹುದು ಎಂದು ಸ್ಪಷ್ಟಪಡಿಸಿತ್ತು. ಇತರ ನೇತಾರರ ಸ್ಮಾರಕಗಳನ್ನು ನಿರ್ಮಿಸದಿರಲು ಕೂಡ ಸರ್ಕಾರ ತೀರ್ಮಾನಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.