ಗುವಾಹಟಿ: ಮಣಿಪುರದಲ್ಲಿ ಸಶಸ್ತ್ರ ಪಡೆ ವಿಶೇಷಾಧಿಕಾರ ವಾಪಸಾತಿಗೆ ಆಗ್ರಹಿಸಿ ನಿರಶನ ಕೈಗೊಂಡು 16 ವರ್ಷಗಳಿಂದ ಆಸ್ಪತ್ರೆವಾಸ ಅನುಭವಿಸಿದ್ದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಶನಿವಾರ ಇಂಫಾಲದ ಆಸ್ಪತ್ರೆಯ ವಿಶೇಷ ವಾರ್ಡ್ನಿಂದ ಕೊನೆಗೂ ಬಿಡುಗಡೆಗೊಂಡರು.
ಉಪವಾಸ ನಿರತರಾಗಿದ್ದ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಿ ಅಲ್ಲಿ ನಳಿಕೆಯ ಮೂಲಕ ದ್ರವಾಹಾರ ನೀಡಲಾಗುತ್ತಿತ್ತು. ಆಗಸ್ಟ್ ಒಂಬತ್ತರಂದು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರೂ ಅವರು ಆಸ್ಪತ್ರೆಯಲ್ಲೇ ಉಳಿಯಬೇಕಾಗಿತ್ತು.
ಶರ್ಮಿಳಾ ಅವರು ಶನಿವಾರ ಬೆಳಿಗ್ಗೆ ಜವಾಹರಲಾಲ್ ನೆಹರೂ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ (ಜೆಎನ್ಐಎಂಎಸ್) ವಿಶೇಷ ಭದ್ರತಾ ವಾರ್ಡ್ನಿಂದ ಬಿಡುಗಡೆಗೊಂಡರು. ನಂತರ ಅವರು ಲಾಂಗೋಲ್ನ ಪ್ರಕೃತಿ ಚಿಕಿತ್ಸಾ ಕೇಂದ್ರ ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದರು.
ಆಸ್ಪತ್ರೆಯಲ್ಲಿ ಮಾನವ ಹಕ್ಕುಗಳ ಗುಂಪುಗಳ ಕಾರ್ಯಕರ್ತರು ಅವರ ಜತೆಗಿದ್ದರು. ಬಿಡುಗಡೆಗೊಂಡ ಬಳಿಕ ಶರ್ಮಿಳಾ ಅವರು ಇಂಫಾಲದ ಕಾಂಗ್ಲಾದಲ್ಲಿ ಹಲವು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
‘ಕೆಲವು ದಿನಗಳ ಕಾಲ ನಾನು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಇರುತ್ತೇನೆ. ಬಳಿಕ ರಾಜಕೀಯ ಕ್ಷೇತ್ರಕ್ಕೆ ಬರುತ್ತೇನೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್ಎಸ್ಪಿಎ) ವಿರುದ್ಧ ನನ್ನ ಚಳವಳಿ ಮುಂದುವರಿಯಲಿದೆ’ ಎಂದರು. ‘ಇಂಫಾಲದಲ್ಲಿ ನನ್ನ ಕಚೇರಿ ಇರಲಿದೆ’ ಎಂದೂ ಅವರು ಪತ್ರಕರ್ತರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.