ನವದೆಹಲಿ (ಪಿಟಿಐ): ಭಿತ್ತಿಪತ್ರ ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿಪಡಿಸಿದರೆಂಬ ಕಾರಣಕ್ಕೆ 25 ಕಾಂಗ್ರೆಸ್ ಸದಸ್ಯರನ್ನು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಐದು ದಿನಗಳ ತನಕ ಅಮಾನತುಗೊಳಿಸಿದ್ದಾರೆ.
ಲಲಿತ್ ಮೋದಿ ಪ್ರಕರಣ ಹಾಗೂ ವ್ಯಾಪಂ ಹಗರಣ ಕುರಿತಂತೆ ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಸೋಮವಾರ ತೀವ್ರ ಗದ್ದಲ ಎಬ್ಬಿಸಿ, ಹಗರಣಗಳಿಗೆ ಸಂಬಂಧಿಸಿದ ಘೋಷಣೆಗಳಿದ್ದ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಸದನದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸದಂತೆ ಹಾಗೂ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡಿದರು. ಆದರೂ ಸದಸ್ಯರು ಗದ್ದಲ ಮುಂದುವರಿಸಿದರು. ಇದೇ ರೀತಿ ಗದ್ದಲ ಮುಂದುವರಿಸಿದರೆ ‘ಸೂಕ್ತ ಕ್ರಮ’ ಕೈಗೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ಎಚ್ಚರಿಕೆಯನ್ನೂ ನೀಡಿದರು.
ಸ್ಪೀಕರ್ ನೀಡಿದ ಎಚ್ಚರಿಕೆಗೂ ಕಾಂಗ್ರೆಸ್ ಸಂಸದರು ಜಗ್ಗಲಿಲ್ಲ. ಹೀಗಾಗಿ ತೀವ್ರ ಗದ್ದಲ ಎಬ್ಬಿಸಿದ 25 ಸಂಸದರನ್ನು ಐದು ದಿನಗಳ ಕಾಲ ಅಮಾನತುಗೊಳಿಸಿದ ಸ್ಪೀಕರ್ ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.