ADVERTISEMENT

265 ಮಾಜಿ ಸಂಸದರಿಗೆ ಸೂಚನೆ

ಮನೆ ಖಾಲಿ ಮಾಡಲು ನೋಟಿಸ್‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2014, 19:30 IST
Last Updated 8 ಜೂನ್ 2014, 19:30 IST

ನವಹದೆಲಿ (ಪಿಟಿಐ): ಜೂನ್‌ 18­ರೊಳಗೆ ವಸತಿಗೃಹ ಖಾಲಿ ಮಾಡಿ! ಹೀಗೊಂದು ಫರ್ಮಾನು ಹೊರ­ಬಿದ್ದಿದೆ. ಇದು ಬಾಡಿಗೆದಾರರಿಗೆ ಮಾಲೀ­ಕರು ಹೇಳಿದ ಮಾತಲ್ಲ. ಲೋಕಸಭಾ ಚುನಾವಣೆಯಲ್ಲಿ ಸೋತಿ­­ರುವ ಸಂಸದರಿಗೆ ಲೋಕಸಭಾ ಸಚಿವಾ­ಲಯ ನೋಟಿಸ್‌ ಜಾರಿ ಮಾಡಿದ್ದು, ಹೊಸ ಸಂಸದರಿಗೆ ಅವಕಾಶ ಮಾಡಿ­ಕೊಡುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿರುವ ಲೋಕ­ಸಭಾ ಮಹಾ ಪ್ರಧಾನ ಕಾರ್ಯದರ್ಶಿ ಪಿ. ಶ್ರೀಧರನ್‌ ಅವರು, ಮಾಜಿ ಸಂಸದರಿಗೆ ಹಾಗೂ ಮಾಜಿ ಸಚಿವರಿಗೆ ಪತ್ರ ಬರೆಯಲಾಗಿದ್ದು, ಸಂಸದರು ಜೂನ್‌ 18ರೊಳಗೆ ಹಾಗೂ ಸಚಿವರು ಜೂನ್‌ 26ರರೊಳಗೆ ಬಂಗಲೆ ಖಾಲಿ ಮಾಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ 320 ಹೊಸ ಸಂಸದರು ಆಯ್ಕೆಯಾಗಿದ್ದಾರೆ. ಅವರೆಲ್ಲರಿಗೂ ವಸತಿಗೃಹ ಒದಗಿಸಿಕೊಡಬೇಕು ಹಾಗೂ ನೂತನ ಸಚಿವರಿಗೂ ಬಂಗಲೆ ನೀಡಬೇಕಾಗಿದೆ ಎಂದು ಅವರು ವಿವರಿಸಿದರು. 

ಮಾಜಿ ಸಂಸದರು ತಮಗೆ ನೀಡಿದ ವಸತಿಗೃಹ ಖಾಲಿ ಮಾಡಿದ ನಂತರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲಿಸಿ ದುರಸ್ತಿ ಕೆಲಸ ಮಾಡಲಿದೆ. ಆ ನಂತರವಷ್ಟೇ ಹಂಚಿಕೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.