ಗುವಾಹಟಿ: ಭಾರತ 1947 ಆಗಸ್ಟ್ 15ರಿಂದಲೇ ಪಾಕಿಸ್ತಾನದ ಜತೆಗಿನ ಶತ್ರುತ್ವವನ್ನು ಮರೆತಿದೆ. ಆದರೆ ಪಾಕಿಸ್ತಾನ ಮಾತ್ರ ಇನ್ನೂ ದ್ವೇಷ ಸಾಧಿಸುತ್ತಿದೆ. ಇದೇ ಹಿಂದೂ ಸಂಸ್ಕೃತಿಗೂ ಹಾಗೂ ಇತರ ಧರ್ಮಗಳ ಸಂಸ್ಕೃತಿಗಿರುವ ವ್ಯತ್ಯಾಸ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮೂರು ರಾಜ್ಯಗಳ ಚುನಾವಣೆ ನಡೆಯುವ ಮುನ್ನ ಈಶಾನ್ಯ ರಾಜ್ಯದಲ್ಲಿ ಏರ್ಪಡಿಸಿದ್ದ ಜಾಥಾದಲ್ಲಿ ಪಾಲ್ಗೊಂಡು ಆರ್ಎಸ್ಎಸ್ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್ ಅವರು, 'ಪಾಕಿಸ್ತಾನ ಯಾವಾಗ ಹುಟ್ಟಿತ್ತೋ ಆಗಲೇ ಸಂಘರ್ಷ ಎಂಬುದು ಜನ್ಮತಾಳಿತು. ಭಾರತ ಪಾಕಿಸ್ತಾನದೊಂದಿಗೆ ವೈಮನಸ್ಸನ್ನು ಎಂದೋ ಮರೆತು ಬಿಟ್ಟಿದೆ. ಆದರೆ ಪಾಕಿಸ್ತಾನ ಮುಂದುವರೆಸಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಹಿಂದುತ್ವ ಎನ್ನುವುದು ಪಾಕಿಸ್ತಾನದಿಂದಲೇ ಬಂದಿದೆ. ಭಾರತದ ಪುರಾತನ ನಾಗರಿಕತೆಗಳಾದ ಹರಪ್ಪಾ, ಮೊಹೆಂಜೋದರೋ ಸಂಸ್ಕೃತಿ ಪಾಕಿಸ್ತಾನದ ನೆಲದಲ್ಲೇ ಹುಟ್ಟಿದೆ. ಆದರೂ ಯಾಕೆ ಪಾಕಿಸ್ತಾನ ತನ್ನನ್ನು ಭಾರತ ಎಂದು ಕರೆದುಕೊಳ್ಳಲು ಹಿಂಜರಿಯುತ್ತಿದೆ?' ಎಂದು ಪ್ರಶ್ನಿಸಿದ್ದಾರೆ
'ಯಾಕೆ ಪಾಕಿಸ್ತಾನವು ಭಾರತದಿಂದ ಪ್ರತ್ಯೇಕತೆ ಬೇಕು ಎಂದು ಕೇಳುತ್ತಿಲ್ಲ. ಏಕೆಂದರೆ ಪಾಕಿಸ್ತಾನ ಭಾರತದೊಂದಿಗೆ ಬೆಸೆದುಕೊಂಡಿರುವ ವಿಚಾರ ಅವರಿಗೂ ತಿಳಿದಿದೆ. ಹಿಂದುತ್ವ ಪಾಕಿಸ್ತಾನದಲ್ಲಿಯೇ ಹುಟ್ಟಿದ್ದರೂ ಅದರ ಗಾಢವಾದ ಪ್ರಭಾವ ಭಾರತದಲ್ಲಿ ಮುಂದುವರೆದಿದೆ' ಎಂದಿದ್ದಾರೆ.
'ವೈವಿಧ್ಯತೆಯ ಹೊರತಾಗಿಯೂ ಹಿಂದುತ್ವದ ಕಾರಣದಿಂದ ಭಾರತದಲ್ಲಿ ಏಕತೆಯಿದೆ. ಮಾನವೀಯ ಸಂದೇಶವನ್ನು ಇಡೀ ಪ್ರಪಂಚಕ್ಕೆ ಸಾರಿದೆ. ಭಾರತೀಯ ಹಿಂದುತ್ವದ ಭಾವನೆ ಮರೆತರೆ ಇಡೀ ರಾಷ್ಟ್ರದೊಂದಿಗಿನ ಸಂಬಂಧ ಮುರಿದಂತಾಗುತ್ತದೆ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.