ಚೆನ್ನೈ: ಮಹಿಳೆಯರಿಗೆ ಮೊಪೆಡ್ ಖರೀದಿಸಲು ಶೇಕಡ 50ರಷ್ಟು ಸಹಾಯಧನ ನೀಡುವ ‘ಅಮ್ಮ ದ್ವಿಚಕ್ರ ವಾಹನ’ ಯೋಜನೆಗೆ ಫೆಬ್ರುವರಿ 24ರಂದು ಚಾಲನೆ ಸಿಗಲಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ 70ನೇ ಜನ್ಮದಿನವೂ ಫೆ.24ರಂದೇ ಬರಲಿದೆ. 125 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಮೊಪೆಡ್ ಅಥವಾ ಸ್ಕೂಟರ್ ಖರೀದಿಸಲು ಶೇಕಡ 50ರಷ್ಟು ಅಥವಾ ಗರಿಷ್ಠ ₹25,000 ಸಹಾಯಧನ ನೀಡುವುದಾಗಿ ಎಎಐಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.
18ರಿಂದ 40 ವರ್ಷದೊಳಗಿನ ಮಹಿಳೆಯರು ಯೋಜನೆಯ ಲಾಭ ಪಡೆಯಲು ಅರ್ಹರು. ಅವರ ವಾರ್ಷಿಕ ವರಮಾನ ₹2.50 ಲಕ್ಷಕ್ಕಿಂತ ಕಡಿಮೆ ಇರಬೇಕು. ಕುಟುಂಬ ನಿರ್ವಹಣೆ ಮಾಡುವ ಮಹಿಳೆ, ವಿಧವೆಯರು, ಅಂಗವಿಕಲ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಆದ್ಯತೆ ನೀಡಲಾಗುವುದು. ಕುಟುಂಬದ ಒಬ್ಬ ಮಹಿಳೆ ಮಾತ್ರ ಯೋಜನೆ ಅರ್ಹರು ಎಂದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಬದರಿನಾಥ ದೇವಾಲಯ: ಏ.30ಕ್ಕೆ ಪುನರಾರಂಭ
ಬದರಿನಾಥ(ಉತ್ತರಾಖಂಡ): ಹಿಮಾಲಯದ ಪವಿತ್ರ ತೀರ್ಥಕ್ಷೇತ್ರ ಬದರೀನಾಥ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ಏ.30ರಿಂದ ಪ್ರವೇಶ ದೊರೆಯಲಿದೆ.
ತೀವ್ರ ಚಳಿ ಇರುತ್ತದೆ ಮತ್ತ ಸಾಕಷ್ಟು ಹಿಮ ಬೀಳುವುದರಿಂದ ಭಕ್ತರಿಗೆ ತೊಂದರೆಯಾಗುತ್ತದೆ ಎಂದು ಪ್ರತಿ ವರ್ಷ ಅಕ್ಟೋಬರ್–ನವೆಂಬರ್ನಿಂದ ಆರು ತಿಂಗಳು ದೇವಾಲಯ ಮುಚ್ಚಲಾಗಿರುತ್ತದೆ.
ಏ.30ರಂದು ಸಂಜೆ 4.30ಕ್ಕೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ದೇವಾಲಯ ತೆರೆಯಲಾಗುವುದು ಎಂದು ತೆಹ್ರಿ ರಾಜವಂಶದ ಪುರೋಹಿತ
ರಾದ ಕೆ.ಪಿ.ಉನಿಯಾಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.