ADVERTISEMENT

ಅಪಹರಣಕಾರರಿಗೆ ಔತಣಕೂಟ!

ಕೆ.ಎಂ.ಸಂತೋಷಕುಮಾರ್
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ಚಿಕ್ಕಮಗಳೂರು ಸಮೀಪದ ಸಖರಾಯಪಟ್ಟಣದ ಅಯ್ಯನಕೆರೆ ಏರಿ ಮೇಲೆ ಅಪಹರಣಕಾರರು ತೇಜಸ್‌ ಅಪಹರಿಸುವ ಹಿಂದಿನ ದಿನ ‘ಗುಂಡು–ತುಂಡು’ ಪಾರ್ಟಿ ಮಾಡಿರುವುದು.
ಚಿಕ್ಕಮಗಳೂರು ಸಮೀಪದ ಸಖರಾಯಪಟ್ಟಣದ ಅಯ್ಯನಕೆರೆ ಏರಿ ಮೇಲೆ ಅಪಹರಣಕಾರರು ತೇಜಸ್‌ ಅಪಹರಿಸುವ ಹಿಂದಿನ ದಿನ ‘ಗುಂಡು–ತುಂಡು’ ಪಾರ್ಟಿ ಮಾಡಿರುವುದು.   

ಚಿಕ್ಕಮಗಳೂರು: ಹಣಕ್ಕಾಗಿ ಜೂಜು ಕೋರ ತೇಜಸ್‌ ಎಂಬಾತನನ್ನು ಅಪಹರಿಸಲು ಖಾಂಡ್ಯ ಪ್ರವೀಣನಿಂದ ಸುಪಾರಿ ಪಡೆದಿರುವ ಅಪಹರಣಕಾರರು ಜಿಲ್ಲೆಯಲ್ಲಿ 3 ದಿನ ವಾಸ್ತವ್ಯ ಮಾಡಿ, ಸಮೀಪದ ಸಖರಾಯಪಟ್ಟಣದ ಪ್ರವಾಸಿ ತಾಣ ಅಯ್ಯನಕೆರೆ ದಂಡೆಯಲ್ಲಿ ‘ಗುಂಡು–ತುಂಡಿನ ಮೋಜು ಕೂಟ’ ನಡೆಸಿರುವ ಸಂಗತಿ ಬಯಲಾಗಿದೆ.

ತಾಲ್ಲೂಕಿನ ಚಿಕ್ಕೊಳಲೆ ಮಾಧವ ಎಂಬಾತನ ತೋಟದಲ್ಲಿ ಜೂನ್‌ 26 (ಭಾನುವಾರ)ರಂದು ರಾತ್ರಿ ನಡೆದ ಜೂಜು ಅಡ್ಡೆಗೆ ಹೋಗಿದ್ದ ತೇಜಸ್‌ನನ್ನು ಅಪಹರಿಸಲು ಖಾಂಡ್ಯ ಪ್ರವೀಣ್‌, ಬೆಂಗಳೂರಿನ ನವೀನ್‌ ಶೆಟ್ಟಿ ಎಂಬುವವನ ಮೂಲಕ 7 ಜನರ ತಂಡ ಕರೆಸಿಕೊಂಡಿದ್ದರು.

ಆದರೆ, ಆ ದಿನ ಅಪಹರಿಸಲು ಸಾಧ್ಯವಾಗಿರಲಿಲ್ಲ. ನಗರದ ಲಾಡ್ಜ್‌ವೊಂದರಲ್ಲಿ ವಾಸ್ತವ್ಯ ಮಾಡಿದ್ದ ಅಪಹರಣಕಾರರ ತಂಡ ಅದೇ ದಿನ ಪ್ರವಾಸಿ ತಾಣ ಅಯ್ಯನಕೆರೆ ಪರಿಸರದಲ್ಲಿ ವಿಹಾರ ನಡೆಸಿತ್ತು.

‘‘ಪ್ರಮುಖ ಆರೋಪಿ ಖಾಂಡ್ಯ ಪ್ರವೀಣ್‌ ‘ತೇಜಸ್‌ನಿಂದ ಹಣ ವಸೂಲಿ ಮಾಡಲು ಹುಡುಗರನ್ನು ಕರೆಸಿದ್ದೇನೆ. ಅವರು ಬೆಂಗಳೂರಿಗೆ ಎತ್ತಿಕೊಂಡು ಹೋಗಿ ಹಣ ವಸೂಲಿ ಮಾಡಿಕೊಡುತ್ತಾರೆ. ಸಿಸಿಬಿ ಪೊಲೀಸರೂ ಬಂದಿದ್ದಾರೆ.

ಅವರಿಗೆ ಔತಣದ ವ್ಯವಸ್ಥೆ ಮಾಡಬೇಕು’ ಎಂದು ತನ್ನ ಸ್ನೇಹಿತ ಕಲ್ಮನೆ ಚಿಟ್‌ಫಂಡ್‌ ಮುಖ್ಯಸ್ಥ ನಟರಾಜನಿಗೆ ತಿಳಿಸಿದ್ದ. ಪ್ರವೀಣನ ಅಣತಿಯಂತೆ ನಟರಾಜ ತನ್ನ ಸ್ನೇಹಿತರ ಮೂಲಕ ಅಪಹರಣಕಾರರಿಗೆ ಮದ್ಯ, ಬಾಟೂಟದ ವ್ಯವಸ್ಥೆ ಮಾಡಿಕೊಟ್ಟಿದ್ದ ಎನ್ನುವುದು ತಿಳಿದು ಬಂದಿದೆ’’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಆರೋಪಿಗಳಾದ ಯಶಸ್‌, ಜೀವ, ಕೀರ್ತಿ ‘ಪಾಕೆಟ್‌ ಮನಿ’ ಮತ್ತು ‘ಔತಣಕೂಟ’ದ ಆಮಿಷಕ್ಕಾಗಿ ಅಪ
ಹರಣದಲ್ಲಿ ಭಾಗಿಯಾಗಿದ್ದಾರೆ. ಯಶಸ್, ತಲೆಮರೆಸಿಕೊಂಡಿರುವ ಆರೋಪಿ ನವೀನ್‌ ಶೆಟ್ಟಿಯ ಮಗ ಅಶ್ವಿನ್‌ಶೆಟ್ಟಿಗೆ ಹತ್ತಿರದ ಸ್ನೇಹಿತ.

ಅಶ್ವಿನ್‌ ಶೆಟ್ಟಿಯ ಆಮಿಷಕ್ಕೆ ಸಿಕ್ಕಿ ವಿದ್ಯಾರ್ಥಿಗಳಾದ ಯಶಸ್‌, ಅಭಿರಾಮ, ಜಾಯ್‌ಮಿಲ್ಟನ್, ಕೀರ್ತಿ ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ದೇಹದಾರ್ಢ್ಯ ಪಟು ಜೀವ, ನವೀನ್‌ ಶೆಟ್ಟಿ ಜತೆಗೆ ನೇರ ಸಂಪರ್ಕದಲ್ಲಿದ್ದು, ಹಣಕ್ಕಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡು
ಬಂದಿದೆ.

ಅಪಹರಣ ಮಾಡಿ ಹಣ ವಸೂಲಿ ಮಾಡಿಕೊಟ್ಟಿದ್ದಕ್ಕೆ ಪ್ರತಿಯಾಗಿ ನವೀನ್‌ ಶೆಟ್ಟಿಗೆ ಸೇರಬೇಕಿದ್ದ ಸುಪಾರಿ ಹಣ ₹5 ಲಕ್ಷ ವನ್ನು ಬ್ಯಾಂಕ್‌ ಖಾತೆಗೆ ಹಾಕಲು ಯಶಸ್‌ ತನ್ನ ತಂದೆ ಲೋಕೇಶ್‌ ₹5 ಲಕ್ಷ ಹಣವನ್ನು ಲೋಕೇಶ್‌ ಅವರ ಆಕ್ಸಿಸ್‌ ಬ್ಯಾಂಕ್‌ಗೆ ಜಮಾ ಮಾಡಲು ಕಡ್ಡಿ ಪ್ರಶಾಂತ ಎಂಬುವವನ ಮೂಲಕ ಕಳುಹಿಸಿದ್ದ.

ಪ್ಯಾನ್‌ ಸಂಖ್ಯೆ ಮತ್ತು ತಾಂತ್ರಿಕ ಕಾರಣದಿಂದ ಖಾತೆಗೆ ಜಮಾ ಮಾಡಲು ಸಾಧ್ಯವಿಲ್ಲವೆಂದು ಹೇಳಿ ಬ್ಯಾಂಕ್‌ ಸಿಬ್ಬಂದಿ ವಾಪಸ್‌ ಕಳುಹಿ
ಸಿದ್ದರು. ಆ ಹಣವನ್ನು ಕಡ್ಡಿ ಪ್ರಶಾಂತ್‌, ಐ.ಜಿ.ರಸ್ತೆಯ ಹೋಟೆಲ್‌ವೊಂದರಲ್ಲಿ ಪತ್ನಿ ಜತೆಗೆ ಇದ್ದ ಖಾಂಡ್ಯ ಪ್ರವೀಣ್‌ಗೆ ಹಸ್ತಾಂತರಿಸಿರುವುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT