ಹಾಸನ: ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ವಿಚಾರದಲ್ಲಿ ಚುನಾವಣಾ ಆಯೋಗದ ಹಠ ಸರಿಯಲ್ಲ ಎಂದು ಜೆಡಿಎಸ್ ವರಿಷ್ಠ, ಸಂಸದ ದೇವೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವದ ಹಲವು ರಾಷ್ಟ್ರಗಳಲ್ಲಿ ಚುನಾವಣೆಗೆ ಮತಪತ್ರ ಬಳಸಲಾಗುತ್ತಿದೆ. ಅನೇಕ ದೇಶಗಳಲ್ಲಿ ಇವಿಎಂ ಬಳಕೆ ಇಲ್ಲ. ಆದರೂ ಚುನಾವಣಾ ಆಯೋಗ ಏಕೆ ಈ ರೀತಿ ಭಯ ಹುಟ್ಟಿಸುತ್ತದೆಯೋ ಗೊತ್ತಿಲ್ಲ. ಮತಯಂತ್ರಗಳಲ್ಲಿ ದೋಷ ಇವೆ ಎಂಬ ಕೂಗಿದೆ. ಆಯೋಗ ಹಠಕ್ಕೆ ಬಿದ್ದಿರುವುದು ಸರಿಯಲ್ಲ’ ಎಂದು ಹೇಳಿದರು.
ಇವಿಎಂ ಎಂಬುದು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಜಾರಿಗೆ ತಂದ ಹೊಸ ವಿಧಾನ ಎಂದ ದೇವೇಗೌಡರು, ಗುಜರಾತ್ ಚುನಾವಣೆಯಲ್ಲಿ ಬಳಸಿದ ಮತಯಂತ್ರಗಳನ್ನು ರಾಜ್ಯಕ್ಕೆ ತರಲಾಗಿದೆ ಎಂದರು.
‘ಯೋಧ ಚಂದ್ರ ಕುಟುಂಬಕ್ಕೆ ಪರಿಹಾರ ದೊರೆಯದಿದ್ದರೆ ಹೋರಾಟ’: ‘ಸುಕ್ಮಾ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಅರಕಲಗೂಡು ತಾಲ್ಲೂಕಿನ ಹರದೂರು ಯೋಧ ಎಚ್.ಎಸ್. ಚಂದ್ರ ಅವರ ಕುಟುಂಬಕ್ಕೆ ವಿವಿಧ ಮೂಲಗಳಿಂದ ಪರಿಹಾರ ದೊರೆಯಲಿದೆ. ಅವರಿಗೆ ದೊರೆಯಬೇಕಿರುವ ಪರಿಹಾರದಲ್ಲಿ ಏರುಪೇರಾದರೆ ಆ ಬಗ್ಗೆ ಸಂಸತ್ನಲ್ಲಿ ಚರ್ಚೆ ಮಾಡುವೆ. ಪರಿಹಾರದ ಮೊತ್ತ ದೊರೆಯುವುದು ವಿಳಂಬವಾದರೆ ಸಂಬಂಧಪಟ್ಟವರೊಂದಿಗೆ ಚರ್ಚಿಸುವೆ’ ಎಂದು ದೇವೇಗೌಡ ಹೇಳಿದರು.
ಯೋಧನ ಕುಟುಂಬಕ್ಕೆ ನಮ್ಮ ಪಕ್ಷದಿಂದಲೂ ಸಹಾಯ ಮಾಡಲಾಗುವುದು. ಶೀಘ್ರ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವೆ ಎಂದೂ ಅವರು ಹೇಳಿದರು.
‘ಚುನಾವಣೆ ಮುಗಿದ ಮೇಲೆ ಹೆಚ್ಚು ದಿನ ಹಾಸನದಲ್ಲೇ ಕಳೆಯಲಿದ್ದೇನೆ. ನಾನು ಒಂದು ದಿನ ಜನರ ಮಧ್ಯೆ ಇಲ್ಲ ಅಂದರೆ ಹುಚ್ಚನಾಗುತ್ತೇನೆ. ಏಕಾಂಗಿಯಾಗಿರುವುದು ನನಗೆ ಕಷ್ಟಸಾಧ್ಯ. ಅದಕ್ಕೇ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನನ್ನನ್ನು ‘24 ಗಂಟೆ ರಾಜಕಾರಣಿ’ ಎನ್ನುತ್ತಿದ್ದರು’ ಎಂದು ಅವರು ನೆನಪಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.