ಬೆಳಗಾವಿ: ಉತ್ತರ ವಲಯ ಐಜಿಪಿ ಅಲೋಕ್ಕುಮಾರ್ ಅವರ ಮೊಬೈಲ್ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ ವ್ಯಕ್ತಿ ಇಲ್ಲಿನ ಹಿಂಡಗಲಾ ಕೇಂದ್ರ ಕಾರಾಗೃಹದ ಕೈದಿ ಎನ್ನುವುದು ಖಚಿತವಾಗಿದೆ.
‘ಐಜಿಪಿ ಅವರಿಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಶಹಜಾನ್ ಎನ್ನುವುದು ಖಚಿತವಾಗಿದೆ. ಆತನಿಂದ ಮೊಬೈಲ್ ಫೋನ್ ಹಾಗೂ ಸಿಮ್ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಉದ್ದೇಶಿಸಲಾಗಿದೆ. ಆತನಿಗೆ ಮೊಬೈಲ್ ಹಾಗೂ ಸಿಮ್ ಕಾರ್ಡ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದು ಮಾರ್ಕೆಟ್ ಎಸಿಪಿ ವಿನಯ ಗಾಂವ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇದೇ 21ರ ರಾತ್ರಿ 9.30ಕ್ಕೆ ಮನೆಯಲ್ಲಿದ್ದಾಗ 70909 14584 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದ. ನಾನು ಯಾರೆಂದು ಈ ವರ್ಷ ತೋರಿಸುತ್ತೇನೆ. ನಾನು ಎಂ.ಎಸ್. ಅಲಿಖಾನ್, ನಕ್ಸಲೈಟ್, ಆರ್ಡಿಎಕ್ಸ್, ಗ್ರನೇಡ್ ಸ್ಪಷಲಿಸ್ಟ್ ಎಂದು ಹೇಳಿದ್ದ. ಅದೇ ಸಂಖ್ಯೆಯಿಂದ ಎಸ್ಎಂಎಸ್ ಕೂಡ ಬಂದಿತ್ತು’ ಎಂದು ಐಜಿಪಿ ಆಪ್ತ ಸಹಾಯಕ ಸಂಜೀವ ಸಂಗಣ್ಣವರ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು.
‘ನನಗೆ ಬೆದರಿಕೆ ಕರೆಗಳು ಹೊಸದೇನಲ್ಲ. ಕೆಲ ಕೈದಿಗಳು ಖಿನ್ನತೆಗೆ ಒಳಗಾಗಿರುತ್ತಾರೆ. ಮಾಡುವುದಕ್ಕೆ ಕೆಲಸವಿರುವುದಿಲ್ಲ. ಹೀಗಾಗಿ, ಇಂತಹ ಕೃತ್ಯಗಳನ್ನು ಮಾಡುತ್ತಾರೆ’ ಎಂದು ಐಜಿಪಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.