ADVERTISEMENT

ಒತ್ತುವರಿ ತೆರವಿಗೆ 4 ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 19:58 IST
Last Updated 16 ಏಪ್ರಿಲ್ 2017, 19:58 IST
ಒತ್ತುವರಿ ತೆರವಿಗೆ  4 ತಿಂಗಳ ಗಡುವು
ಒತ್ತುವರಿ ತೆರವಿಗೆ 4 ತಿಂಗಳ ಗಡುವು   

ನವದೆಹಲಿ: ಚಿಕ್ಕಮಗಳೂರು ಜಿಲ್ಲೆಯ ಮಸಗಲಿ ಮೀಸಲು ಅರಣ್ಯ ಒತ್ತುವರಿ ಮಾಡಿಕೊಂಡವರನ್ನು ನಾಲ್ಕು ತಿಂಗಳಲ್ಲಿ ತೆರವು ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.

ಮೀಸಲು ಅರಣ್ಯ ಪ್ರದೇಶದ ಮರು ಸರ್ವೆ ಮಾಡಿದ ಪ್ರದೇಶಗಳಲ್ಲಿ ಒತ್ತುವರಿ ಮಾಡಿಕೊಂಡವರ ಸಮೀಕ್ಷೆ ನಡೆಸಿದ ನಂತರ, ಅವರನ್ನು ತೆರವುಗೊಳಿಸುವ ಮತ್ತು ಪುನರ್ವಸತಿ ಕಲ್ಪಿಸುವ ಕಾರ್ಯ ನಡೆಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ. ಒತ್ತುವರಿ ತೆರವಿಗೆ ಸಂಬಂಧಿಸಿ 1995ರಲ್ಲಿ ‘ಸುಪ್ರೀಂ’ ಗೆರಿಟ್ ಅರ್ಜಿ ಸಲ್ಲಿಸಲಾಗಿದೆ.

ಮೀಸಲು ಅರಣ್ಯ ಪ್ರದೇಶದ ಮರು ಸರ್ವೆ ಮಾಡಿ ಗಡಿಗಳನ್ನು ಗುರುತಿಸಿ ಗಡಿ ಕಲ್ಲುಗಳನ್ನು ನೆಡಲಾಗಿದೆ ಹಾಗೂ ನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಕೇಂದ್ರದ ಉನ್ನತಾಧಿಕಾರ ಸಮಿತಿ ಮತ್ತು ರಾಜ್ಯ  ಅರಣ್ಯ ಇಲಾಖೆ ಪ್ರತ್ಯೇಕವಾಗಿ ವರದಿ ಸಲ್ಲಿಸಿವೆ.

ADVERTISEMENT

ಇದೇ ರೀತಿ ಜಿಲ್ಲೆಯ ಸಾರಗೋಡು ಮತ್ತು  ತತ್ಕೊಳ ಮೀಸಲು ಅರಣ್ಯ ಪ್ರದೇಶದ ಒತ್ತುವರಿಯನ್ನೂ ಸಮೀಕ್ಷೆ ಮಾಡಲಾಗಿದೆ. ತತ್ಕೊಳದ 611 ಎಕರೆ ಮೀಸಲು ಅರಣ್ಯ ಪ್ರದೇಶದಲ್ಲಿ 148 ಒತ್ತುವರಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 550 ಎಕರೆ ವಿಸ್ತೀರ್ಣದ  ಸಾರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ  115 ಒತ್ತುವರಿ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಸುಪ್ರೀಂಗೆ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.