ಚಿತ್ರದುರ್ಗ: ಹತ್ತು ದಿನಗಳ ಹಿಂದೆ ಜಿಲ್ಲೆ ಗಡಿ ದಾಟಿದ್ದ ಎರಡು ಆನೆಗಳಲ್ಲಿ ಒಂದು ಆನೆ ಶುಕ್ರವಾರ ಜಿಲ್ಲೆಗೆ ವಾಪಸ್ ಬಂದಿದೆ.
ಚನ್ನಗಿರಿ ತಾಲ್ಲೂಕು ಬೆಟ್ಟಕಡೂರಿನ ಮೂಲಕ ಇಂದು ಬೆಳಿಗ್ಗೆ 7.30ರ ಸುಮಾರಿಗೆ ಜಿಲ್ಲೆಯ ತಾಳಿಕೋಟೆ ಗ್ರಾಮ ಪ್ರವೇಶಿಸಿ, ಮೂವರನ್ನು ಗಾಯಗೊಳಿಸಿದೆ.
ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಬಳಿ ರೈತರು ಹಾಗೂ ಎತ್ತುಗಳಿಗೆ ತಿವಿದು ಗಾಯಗೊಳಿಸಿದೆ. ತಾಳಿಕಟ್ಟೆ ಗ್ರಾಮದ ಸುರೇಶ್, ಮುದಿಯಪ್ಪ ಹಾಗೂ ಬಸಮ್ಮ ಎಂಬುವವರಿಗೆ ಗಾಯಗಳಾಗಿವೆ. ಒಂದು ಎತ್ತಿನ ಹೊಟ್ಟೆಗೆ ಕರುಳು ಹೊರಬರುವಂತೆ ಆನೆ ತಿವಿದಿದೆ. ಸದ್ಯ ಹೊಳಲ್ಕೆರೆ ತಾಲ್ಲೂಕಿನ ತುಪ್ಪದಹಳ್ಳಿ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರಬಹುದೆಂದು ಅಂದಾಜಿಸಲಾಗುತ್ತಿದೆ.
ಡಿ.3ರ ರಾತ್ರಿ ಆಂಧ್ರದ ಗಡಿಯಿಂದ ಮೊಳಕಾಲ್ಮರು ತಾಲ್ಲೂಕು ಪ್ರವೇಶಿಸಿದ್ದ ಎರಡು ಆನೆಗಳು ಡಿ.8 ರವರೆಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸುತ್ತಾಡಿ, ಕೆರೆ ಅಂಗಳದಲ್ಲಿ ಅಡ್ಡಾಡಿ, ಜಮೀನುಗಳಲ್ಲಿದ್ದ ಬೆಳೆ ನಾಶ ಮಾಡಿ, ಕಾತ್ರಾಳ್ ಕೆರೆ ಮೂಲಕ ಸಿರಿಗೆರೆ ಸಮೀಪದ ಹಳವುದರ, ಅಳಗವಾಡಿಯಿಂದ ಭದ್ರಾ ಅರಣ್ಯದತ್ತ ಹೋಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.