ADVERTISEMENT

ಧಾರವಾಡದ ಮನೆ ಮಾರಿದ ಕಾರ್ನಾಡ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:41 IST
Last Updated 24 ನವೆಂಬರ್ 2015, 19:41 IST

ಧಾರವಾಡ: ಹಿರಿಯ ಸಾಹಿತಿ ಗಿರೀಶ ಕಾರ್ನಾಡರಿಗೆ ಸೇರಿದ್ದ, ಇಲ್ಲಿನ ಸಾರಸ್ವ ತಪುರದ ರೆಡ್ಡಿ ಕಾಲೊನಿಯಲ್ಲಿರುವ ಮನೆ ಮಂಗಳವಾರ ಮಾರಾಟವಾಯಿತು. ಪಶ್ಚಿಮ ಬಂಗಾಳ ಮೂಲದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಮಧು ಅಮಿತ್‌ ಮಾಧುರಿ ಮನೆಯನ್ನು ಖರೀದಿಸಿದರು. ಮನೆ ಹಾಗೂ14.5 ಗುಂಟೆ ಜಾಗ ಸೇರಿ ₹ 2.48 ಕೋಟಿಗೆ ಮಾರಾಟವಾಗಿದೆ.

ಭದ್ರತೆ: ನೋಂದಣಿಗಾಗಿ ಕಾರ್ನಾಡ ಖರೀದಿದಾರರಾದ ಮಾಧುರಿ ಅವ ರೊಂದಿಗೆ  ಉಪನೋಂದ ಣಾಧಿಕಾರಿ ಕಚೇರಿಗೆ ಬಂದಿದ್ದಾಗ ಅವರಿಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು (ಟಿಪ್ಪು ಕುರಿತು ಇತ್ತೀಚೆಗೆ ಅವರು ನೀಡಿದ ಹೇಳಿಕೆ ವಿವಾದದ ಹಿನ್ನೆಲೆಯಲ್ಲಿ).ಮಾರಾಟ ಪ್ರಕ್ರಿಯೆಗೆ ಸಂಬಂ ಧಿಸಿದಂತೆ ಯಾವುದೇ ರೀತಿಯ ಪ್ರತಿ ಕ್ರಿಯೆ ನೀಡಲು ಕಾರ್ನಾಡ ನಿರಾ ಕರಿಸಿದರು.

ಐತಿಹಾಸಿಕ ಮನೆ: ‘ಕೊಪ್ಪೀಕರ ಎಂಬುವ ವರಿಗೆ ಸೇರಿದ್ದ ಈ ಮನೆಯಲ್ಲಿ ಬೆಳಗಾವಿ ಅಧಿವೇಶನಕ್ಕೆ ಬಂದಿದ್ದ ಮಹಾತ್ಮಾ ಗಾಂಧೀಜಿ ತಂಗಿದ್ದರು ಎಂಬ ಸುದ್ದಿ ಪ್ರಚಲಿತದಲ್ಲಿದೆ. ಈ ಮನೆಯನ್ನು ಸರ್ಕಾರಿ ವೈದ್ಯರಾಗಿದ್ದ ಗಿರೀಶ್‌ ಅವರ ತಂದೆ ಡಾ.ರಘುನಾಥ ಕಾರ್ನಾಡ  1951ರಲ್ಲಿ ಖರೀದಿಸಿದ್ದರು.

ಗಿರೀಶ್‌ ಈ ಮನೆಯಲ್ಲಿ ಇದ್ದುಕೊಂಡೇ ಬಾಸೆಲ್ ಮಿಷನ್‌ನಲ್ಲಿ ಪ್ರೌಢಶಾಲೆ, ಕರ್ನಾಟಕ ಕಲಾ ಕಾಲೇಜಿನಲ್ಲಿ ಪದವಿ ಹಾಗೂ ಕರ್ನಾಟಕ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು’ ಎಂದು ಗಿರೀಶ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಸುರೇಶ ಕುಲಕರ್ಣಿ ತಿಳಿಸಿದರು.

ಡಾ.ರಘುನಾಥ ನಂತರ ಮನೆಯನ್ನು ತಮ್ಮ ಮಗಳಿಗೆ ನೀಡಿದ್ದರು. ಅವರಿಂದ ಗಿರೀಶ್‌ ಕಾರ್ನಾಡ ಖರೀದಿಸಿದ್ದರು. ಬೆಂಗಳೂರಿನಲ್ಲೇ ಹೆಚ್ಚಾಗಿ ಇರುತ್ತಿದ್ದ ಅವರು ಆಗೊಮ್ಮೆ ಈಗೊಮ್ಮೆ ಇಲ್ಲಿ ಬಂದು ತಂಗುತ್ತಿದ್ದರು. ಸಾಹಿತ್ಯ ಹಾಗೂ ಸಿನಿಮಾ ವಲಯದ ಕಾರ್ನಾಡರ ಬಳಗ ಆಗಾಗ ಇದೇ ಮನೆಯಲ್ಲಿ ಚರ್ಚೆ ನಡೆಸುತ್ತಿತ್ತು.

ಕೀರ್ತಿನಾಥ ಕುರ್ತಕೋಟಿ, ಜಿ.ಬಿ.ಜೋಶಿ, ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ, ಮಹೇಶ ಯಲೆಕುಂ ಚವಾರ, ಸಿದ್ಧಲಿಂಗ ಪಟ್ಟಣಶೆಟ್ಟಿ ಸೇರು ತ್ತಿದ್ದರು. ಬಾಲಿವುಡ್‌ನ ಅಮೋಲ್ ಪಾಲೇಕರ್‌, ಶ್ಯಾಂ ಬೆನಗಲ್‌, ಸ್ಮಿತಾ ಪಾಟೀಲ, ಶಬಾನಾ ಆಜ್ಮಿ, ಅಮರೀಶ ಪುರಿ, ಓಂ ಪುರಿ, ಶಂಕರನಾಗ್‌, ಅನಂತ ನಾಗ್‌ ಮುಂತಾದವರು ಈ ಮನೆಯಲ್ಲಿ ತಂಗಿದ್ದರು. ಜತೆಗೆ ಸಿನಿಮಾ ಕುರಿತು ಚರ್ಚೆ ನಡೆಯುತ್ತಿತ್ತು.ನಾಟಕಕಾರ ಬಿ.ವಿ. ಕಾರಂತ ಕೂಡ ಧಾರವಾಡಕ್ಕೆ ಬಂದಾಗ ಈ ಮನೆಯಲ್ಲಿ ತಂಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.