ಕಾಸರಗೋಡು: ದಕ್ಷಿಣ ಅಮೆರಿಕದ ವೆನಿಜುವೆಲಾದಲ್ಲಿ ಆಯುರ್ವೇದ ಔಷಧಿ ಕಂಪೆನಿ ಮಾಲೀಕರಾದ ಬದಿಯಡ್ಕ ಬಳಿಯ ಪಳ್ಳತ್ತಡ್ಕ ನಿವಾಸಿ ಕುಮಾರ್ ಪ್ರಸಾದ್ (41) ಅವರನ್ನು ಅಪರಿಚಿತರ ತಂಡವೊಂದು ಗುಂಡಿಟ್ಟು ಕೊಲೆ ಮಾಡಿದೆ. ಶುಕ್ರವಾರ ಈ ಕೊಲೆ ನಡೆದಿದೆ. ಅವರ ಕಂಪೆನಿಯ ಮಹಿಳಾ ಸಿಬ್ಬಂದಿಯೊಬ್ಬರನ್ನೂ ಹಂತಕರು ಕೊಂದಿದ್ದಾರೆ.
ವೆನಿಜುವೆಲಾದಲ್ಲಿ ವಿಜ್ಞಾನಿಯಾಗಿದ್ದ ದಿವಂಗತ ಪಳ್ಳತ್ತಡ್ಕ ಕೇಶವ ಭಟ್ಟರ ಮಗನಾದ ಕುಮಾರ್ ಪ್ರಸಾದ್, ತಮ್ಮ ತಂದೆಯವರು ನಿಧನರಾದ ಬಳಿಕ 2010 ರಿಂದ ಆಯುರ್ವೇದ ಕಂಪೆನಿ ನಡೆಸುತ್ತಿದ್ದರು.
ಅವರ ತಾಯಿ ಉಡುಪಿ ನಿವಾಸಿಯಾಗಿರುವ ದೇವಿಕಾ, ಒಡಹುಟ್ಟಿದವರಾದ ಸುಮಾ, ಪವನ್, ಅನಸೂಯ ಅವರೂ ವೆನಿಜುವೆಲಾದಲ್ಲೇ ನೆಲೆಸಿದ್ದಾರೆ. ಕುಮಾರ್ ಪ್ರಸಾದ್ ಅವಿವಾಹಿತರಾಗಿದ್ದು, ವರ್ಷದ ಹಿಂದೆಯಷ್ಟೇ ಪಳ್ಳತ್ತಡ್ಕಕ್ಕೆ ಬಂದಿದ್ದರು.
ವೆನಿಜುವೆಲಾದಲ್ಲಿರುವ ಪ್ರಸಾದ್ ಅವರ ಔಷಧಿ ಕಂಪೆನಿಯಿಂದ ಅವರನ್ನು ಹಾಗೂ ಮಹಿಳಾ ಸಿಬ್ಬಂದಿಯನ್ನು ಹೊರಗೆಳೆದು ಹಾಕಿ ಹತ್ಯೆ ನಡೆಸಿರುವುದಾಗಿ ಊರಿಗೆ ಮಾಹಿತಿ ಲಭಿಸಿದೆ. ಔಷಧಿ ಕಂಪೆನಿಗಳ ಮಧ್ಯೆ ಇದ್ದ ದ್ವೇಷವೇ ಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.