ಬಂಟ್ವಾಳ: ತಾಲ್ಲೂಕಿನ ಅಮ್ಮುಂಜೆ ಮತ್ತು ಕಳ್ಳಿಗೆ ಗ್ರಾಮದ ಗಡಿಭಾಗ ರಾಮನಗರ ಎಂಬಲ್ಲಿ ರಿಕ್ಷಾ ಚಾಲಕ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ವಲಯ ಘಟಕದ ಅಧ್ಯಕ್ಷ ಮಹಮ್ಮದ್ ಆಶ್ರಫ್ (35) ಎಂಬುವವರನ್ನು ಆರು ಮಂದಿ ಅಪರಿಚಿತರು ತಲವಾರ್ಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಇದರಿಂದ ಬಂಟ್ವಾಳ ತಾಲ್ಲೂಕಿನ ಕೆಲವೆಡೆ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲಾಯಿ ಮದೀನಾ ಜುಮ್ಮಾ ಮಸೀದಿಯಲ್ಲಿ ಬುಧವಾರ ಬೆಳಿಗ್ಗೆ ನಮಾಜು ಮುಗಿಸಿದ್ದ ಅಶ್ರಫ್, ಬೆಳಿಗ್ಗೆ 6 ಗಂಟೆಗೆ ಮನೆಯಲ್ಲೇ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ, ಗುರುವಾರ ನಡೆಯಬೇಕಿದ್ದ ಪಕ್ಷದ ನೂತನ ಕಚೇರಿ ಉದ್ಘಾಟನಾ ಸಮಾರಂಭ ಕುರಿತು ಚರ್ಚಿಸಿದ್ದರು. ನಂತರ ಎಳಂದೂರು ಎಂಬಲ್ಲಿ ರಸ್ತೆ ದುರಸ್ತಿ ಕೆಲಸದ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಬೀಡಿ ಕಂಪೆನಿಯ ನೌಕರ ಚಕ್ಕರ್ ಶೀನ ಪೂಜಾರಿ ಎಂಬುವವರ ಜೊತೆ ಬೀಡಿ ಸಾಗಿಸಲು ರಾಮನಗರಕ್ಕೆ ಬಾಡಿಗೆಗೆ ತೆರಳಿದ್ದರು.
ರಾಮನಗರದಲ್ಲಿ ಆಟೊ ನಿಲ್ಲಿಸಿದ ಬಳಿಕ ಶೀನ ಪೂಜಾರಿ ಬೀಡಿ ಕಟ್ಟುಗಳನ್ನು ತರಲು ಹೋಗಿದ್ದರು. ಎಸ್ಡಿಪಿಐ ಕಚೇರಿಗೆ ಬಳಿಯಲು ತಂದಿದ್ದ ಬಣ್ಣದ ಡಬ್ಬಿಗಳನ್ನು ಪಡೆಯಲು ಅದೇ ವೇಳೆಗೆ ಇಮ್ತಿಯಾಝ್ ಮತ್ತು ಇಕ್ಬಾಲ್ ಎಂಬ ಆಟೊ ಚಾಲಕರು ಅಲ್ಲಿಗೆ ಬಂದಿದ್ದರು. ಅಷ್ಟರಲ್ಲಿ ಎರಡು ಮೋಟಾರ್ ಬೈಕ್ಗಳಲ್ಲಿ ಬಂದ ಆರು ಮಂದಿ ಹೆಲ್ಮೆಟ್ಧಾರಿ ಯುವಕರು ಅಶ್ರಫ್ ಮೇಲೆ ತಲವಾರುಗಳಿಂದ ಹಲ್ಲೆ ನಡೆಸಿ, ಪರಾರಿಯಾದರು. ತಲೆಯ ಹಿಂಬದಿಗೆ ಬಿದ್ದ ಪೆಟ್ಟಿನಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮೃತಪಟ್ಟರು.
ಶೀನ ಪೂಜಾರಿ, ಇಮ್ತಿಯಾಝ್ ಮತ್ತು ಇಕ್ಬಾಲ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಈ ಕುರಿತು ದೂರು ನಿಡಿದ್ದಾರೆ.
ಘಟನಾ ಸ್ಥಳದಲ್ಲಿ ಒಂದು ತಲವಾರ್ ಮತ್ತು ಒಂದು ಹೆಲ್ಮೆಟ್ ದೊರೆತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.