ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ಎಂದಿನಂತೆ ಸಾಹಿತ್ಯದ ಸ್ಪರ್ಶ ನೀಡಿದರು. ತಮ್ಮ ಭಾಷಣದಲ್ಲಿ ಡಿ.ವಿ.ಜಿ ಅವರ ಕಗ್ಗದಿಂದ ಹಿಡಿದು ಅಂಬೇಡ್ಕರ್ ಅವರ ಸಾಲುಗಳನ್ನು ಉಲ್ಲೇಖಿಸಿದರು.
ಬಜೆಟ್ ಮಂಡನೆಯ ಆರಂಭದಲ್ಲಿ ಡಿ.ವಿ.ಜಿ ಅವರ,
ಹೊಸ ಚಿಗುರು ಹಳೇ ಬೇರು ಕೋಡಿರಲು ಮರ ಸೊಬಗು|
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ||
ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ|
ಜಸವು ಜನಜೀವನಕೆ– ಮಂಕುತಿಮ್ಮ
ಸಾಲುಗಳನ್ನು ಪ್ರಸ್ತಾಪಿಸುವ ಮೂಲಕ ಸಮಾನ ಹಾಗೂ ಸಮಗ್ರ ಬೆಳವಣಿಗೆಗೆ ಸರ್ಕಾರ ಶ್ರಮಿಸುತ್ತಿದೆ ಎಂದರು.
ಕೃಷಿ ಕ್ಷೇತ್ರವನ್ನು ಪ್ರಸ್ತಾಪಿಸುವ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ
‘ಬೆಳೆಯೇ ಭೂಮಿಯ ಬಂಗಾರ
ಬೆಳಯೇ ದೇವರ ಅವತಾರ ' ಎಂಬ ದ್ವಿಪದಿ ಉಲ್ಲೇಖಿಸಿದರು.
‘ಹೆಣ್ಣು ಮಕ್ಕಳ ಬದುಕಿನ ಸುಧಾರಣೆಗಳ
ಆಧಾರದ ಮೇಲೆ ಸಮಾಜದ ಪ್ರಗತಿ ಅಳೆಯಬೇಕು’
–ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ನುಡಿಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದ ಮುನ್ನೋಟ ನೀಡಿದರು.
ನಂತರದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ,
‘ಜಾತಿ–ಕುಲ–ಮತ ಧರ್ಮ ಪಾಶಗಳ ಕಡಿದೊಡೆದು
ಎದೆ ಹಿಗ್ಗಿ ಹಾಡಬೇಕು
ಯುಗ ಯುಗಗಳಾಚೆಯಲಿ ಲೋಕ ಲೋಕಾಂತರದಲ್ಲಿ
ಆ ಹಾಡು ಗುಡುಗಬೇಕು’
–ಎಂಬ ಸಾಲುಗಳೊಂದಿಗೆ ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಇಲಾಖೆ ಕುರಿತು ಬಜೆಟ್ನಲ್ಲಿ ಪ್ರಸ್ತಾಪಿಸಿದರು.
ಕನ್ನಡ ಮತ್ತು ಸಂಸ್ಕೃತಿ ಕುರಿತ ಇಲಾಖೆಯ ಕುರಿತು ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದು ಕುವೆಂಪು ಅವರ,
‘ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮಿರುವುದು’
-ಸಾಲುಗಳನ್ನು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.