ADVERTISEMENT

ಬಿಜೆಪಿ ದೊಡ್ಡ ಮನಸ್ಸು ಮಾಡಬೇಕು: ಹೊರಟ್ಟಿ

ಏಕಪಕ್ಷೀಯ ತೀರ್ಮಾನ ಮಾಡಿಲ್ಲ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 19:30 IST
Last Updated 25 ಜೂನ್ 2016, 19:30 IST

ಹಾವೇರಿ/ಗದಗ/ಬಳ್ಳಾರಿ:  ಡಿ.ಎಚ್‌. ಶಂಕರಮೂರ್ತಿ ಆರು ವರ್ಷ ಪೂರೈಸಿದ್ದಾರೆ. ಹೊಸ ಸಭಾಪತಿಯ ಅವಿರೋಧ ಆಯ್ಕೆಗೆ ಕಾಂಗ್ರೆಸ್‌ ಸಹಮತ ನೀಡಬಹುದು. ಆದರೆ, ಬಿಜೆಪಿ ದೊಡ್ಡ ಮನಸ್ಸು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾವೇರಿಯಲ್ಲಿ ಹೇಳಿದ್ದಾರೆ.

ವೈಯಕ್ತಿಕವಾಗಿ, ತಮಗೆ ವಿಧಾನ ಪರಿಷತ್‌ ಸದಸ್ಯನಾಗಿ ಜನತೆಗೆ ಸ್ಪಂದಿಸುವುದು ಇಷ್ಟ. ಆದರೆ, ಹಿರಿಯರ ನಿರ್ಧಾರಕ್ಕೆ ಬದ್ಧ ಆಗುವುದಾಗಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆದರೆ, ‘ಶಂಕರಮೂರ್ತಿ ಚೆನ್ನಾಗಿ ಕೆಲಸ ಮಾಡಿದ್ದು ಅವರ ಬದಲಾವಣೆ ಅಗತ್ಯ ಇಲ್ಲ.  ದೇವೇಗೌಡರು ಕೂಡ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ ತಮಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಗದುಗಿನಲ್ಲಿ ಹೇಳಿದ್ದಾರೆ.

ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಸ್ಥಾನಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್‌ ಹೊಂದಾಣಿಕೆ ಮುಂದುವರಿಯಲಿದೆ ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಬಳ್ಳಾರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಶಂಕರಮೂರ್ತಿಯವರೇ ಖುದ್ದಾಗಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ್ದು,   ಹೊಂದಾಣಿಕೆ ಮುಂದುವರಿಯುತ್ತದೆ ಎಂದು ದೇವೇಗೌಡರು ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಮುಂದುವರಿದರೆ ಕಾಂಗ್ರೆಸ್ ಅಸಹಾಯಕವಾಗುತ್ತದೆ ಎಂದರು.

ಏಕಪಕ್ಷೀಯ ತೀರ್ಮಾನ ಇಲ್ಲ
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ನೇಮಕದಲ್ಲಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಆಯಾ ಜಿಲ್ಲೆಗಳ    ಸ್ಥಳೀಯ ಮುಖಂಡರ ಜತೆ ಸಮಾಲೋಚನೆ ನಡೆಸಿಯೇ ಆಯ್ಕೆ ಮಾಡಲಾಗಿದೆ. ಈಶ್ವರಪ್ಪನವರು  ತಪ್ಪು ಗ್ರಹಿಕೆಯಿಂದ ಮಾತನಾಡಿದ್ದಾರೆ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಚಾರ ಅಲ್ಲ. ಈಶ್ವರಪ್ಪನವರ ಜತೆಗೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.