ಚಿತ್ರದುರ್ಗ: ‘ಪ್ರಜಾಪ್ರಭುತ್ವದಲ್ಲಿ ಮತಭಿಕ್ಷೆ ಕೇಳುವವರೆಲ್ಲಾ ದಾಸಯ್ಯರೇ, ಮತದಾರರೇ ಮಾಲೀಕರು‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪಗೆ ತಿರುಗೇಟು ನೀಡಿದರು.
ತಾಲ್ಲೂಕಿನ ಸಿರಿಗೆರೆಯಲ್ಲಿ ತರಳಬಾಳು ಲಿಂ. ಜಗದ್ಗುರು ಶಿವಕುಮಾರಸ್ವಾಮಿ ಅವರ 25ನೇ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದರು. ನಾವು ಸಾರ್ವಜನಿಕರ ಮುಂದೆ ದಾಸಯ್ಯರೇ ಮತಭಿಕ್ಷೆಗೆ ಜನರ ಬಳಿ ಹೋಗಲೇಬೇಕು. ಈಶ್ವರಪ್ಪ ಅವರಿಗೆ ಬುದ್ಧಿ ಕಡಿಮೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಬಿಜೆಪಿ ಮುಖಂಡರ ನಿಯೋಗ ಮಹದಾಯಿ ಯೋಜನೆ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿಯಾಗಿರುತ್ತಿರುವುದು ಸಂತೋಷದ ಸಂಗತಿ. ‘ಮನೆ- ಮನೆಗೆ ಕಾಂಗ್ರೆಸ್’ ಬಿಜೆಪಿಯ ಕಾರ್ಯಕ್ರಮಗಳ ನಕಲು ಅಲ್ಲ. 2013ರಲ್ಲಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಬಿಜೆಪಿ ಅವರು ಹತಾಶರಾಗಿ ಆರೋಪಿಸುತ್ತಿದ್ದಾರೆ ಎಂದರು.
ಲಿಂಗಾಯತ ರ್ಯಾಲಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಲಿಂಗಾಯತ ಬೃಹತ್ ರ್ಯಾಲಿಯಲ್ಲಿ ಸಚಿವರು ಭಾಗಿಯಾಗುವುದು ಅವರ ವೈಯಕ್ತಿಕ ವಿಚಾರ ಎಂದು ಪ್ರತಿಕ್ರಿಯಿಸಿದರು.
ಕೆರೆಗೆ ನೀರು ತುಂಬಿಸುವುದು ಸರ್ಕಾರದ ಆದ್ಯತೆ ಕೆಲಸ:
ಹವಾಮಾನ ವೈಪರೀತ್ಯದಿಂದಾಗಿ ಮಳೆ ಪ್ರಮಾಣ ಕ್ಷೀಣಿಸಿದೆ. ಅಕಾಲಿಕ ಮಳೆಗಾಲದಿಂದಾಗಿ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. ಅಂತರ್ಜಲ ಪಾತಾಳಕ್ಕಿಳಿದಿದೆ. ಇವೆಲ್ಲ ಸಮಸ್ಯೆಗಳಿಗೆ ಏಕೈಕ ಪರಿಹಾರ ಎಂಬಂತೆ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಅವರು ಕೈಗೊಂಡಿರುವ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ಆದ್ಯತೆಯ ಕಾರ್ಯವಾಗಿ ಪರಿಗಣಿಸಲಿದೆ' ಎಂದರು.
ಇಲ್ಲಿಯವರೆಗೂ ಕೆರೆಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ₹7ಸಾವಿರ ಕೋಟಿ ಖರ್ಚು ಮಾಡಿದೆ. ಮುಂದಿನ ದಿನಗಳಲ್ಲೂ ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಚಿಂತನೆ ನಡೆಸಿದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.