ADVERTISEMENT

ಮಲೆ ಮಹದೇಶ್ವರದಲ್ಲಿ ಹರಕೆ ಜಾನುವಾರು ಸ್ವೀಕಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2015, 19:51 IST
Last Updated 28 ಡಿಸೆಂಬರ್ 2015, 19:51 IST

ಬೆಂಗಳೂರು: ‘ಮಲೆ ಮಹದೇಶ್ವರ ದೇವಸ್ಥಾನಕ್ಕೆ ಭಕ್ತರು ಹರಕೆ ರೂಪದಲ್ಲಿ ನೀಡುವ ಜಾನುವಾರುಗಳನ್ನು ಸ್ವೀಕರಿಸುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ’ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್.ಮಹದೇವಪ್ರಸಾದ್‌ ತಿಳಿಸಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇವಸ್ಥಾನದ ಸುತ್ತಲೂ ಗುಡ್ಡಗಾಡು ಪ್ರದೇಶ ಇದೆ. ಜಾನುವಾರುಗಳನ್ನು ಸಾಕಲು ಸೂಕ್ತ ವ್ಯವಸ್ಥೆ ಇಲ್ಲ.  ಕುಡಿಯುವ ನೀರಿನ ಕೊರತೆಯೂ ಅಲ್ಲಿದೆ.  ಹಾಗಾಗಿ ಜಾನುವಾರುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಬೇಕಾದ ಸ್ಥಿತಿ ಬಂದಿದೆ’ ಎಂದರು.

‘ಈ ದೇವಸ್ಥಾನಕ್ಕೆ  ಜಾನುವಾರು ಗಳನ್ನು ಹರಕೆ ರೂಪದಲ್ಲಿ ಒಪ್ಪಿಸುವ ಪರಂಪರೆ ಬಹಳ ಹಿಂದಿನಿಂದಲೂ ನಡೆದು ಬಂದಿದೆ. ದಾನ ರೂಪದಲ್ಲಿ ಬಂದ ಜಾನುವಾರುಗಳನ್ನು ಮಾರಾಟ ಮಾಡುವ ಪರಿಪಾಠ ಮದರಾಸು ಪ್ರಾಂತ್ಯದ ಆಳ್ವಿಕೆ ಕಾಲದಿಂದಲೂ ಇತ್ತು. ಜಾನುವಾರುಗಳನ್ನು ಖರೀದಿಸಿದವರು ಅವುಗಳನ್ನು ಎಲ್ಲಿಗೆ ಕೊಂಡೊಯ್ಯುತ್ತಿ ದ್ದರು  ಎಂಬ ಬಗ್ಗೆ ನಿಗಾ ಇಡುತ್ತಿರಲಿಲ್ಲ’  ಎಂದರು. ಹರಕೆಯ ಜಾನುವಾರುಗಳು  ಕಸಾಯಿಖಾನೆ ಸೇರುತ್ತಿವೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು.

ಗೋಶಾಲೆ ತೆರೆಯುವ ಚಿಂತನೆ: ‘ಮಲೆ ಮಹದೇಶ್ವರ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹರಕೆಯ ಜಾನುವಾರುಗಳಿಗಾಗಿ ಗೋಶಾಲೆ ಆರಂಭಿಸುವ ಚಿಂತನೆಯೂ ಇದೆ’ ಎಂದು ಸಚಿವರು ‌ ತಿಳಿಸಿದರು.

‘ಗೋಶಾಲೆ ನಿರ್ಮಿಸಲು  ಸೂಕ್ತ ಜಾಗ ಇಲ್ಲ. ದೇವಸ್ಥಾನದ ಸಮೀಪದಲ್ಲೇ ಅರಣ್ಯ ಇದೆ. ಗೋಶಾಲೆ ನಿರ್ಮಾಣ ದಿಂದ ಅಲ್ಲಿನ ವನ್ಯಜೀವಿಗಳಿಗೂ ತೊಂದರೆ ಆಗಬಾರದು. ಜನವರಿ 1ರಂದು ಪ್ರಾಧಿಕಾರದ ಸಭೆ ನಡೆಯಲಿದೆ. ಗೋಶಾಲೆಯನ್ನು   ಎಲ್ಲಿ ನಿರ್ಮಿಸಬೇಕು, ಹೇಗೆ ಮಾಡಬೇಕು  ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಜಾನುವಾರು ಒಪ್ಪಿಸುವುದಾಗಿ ಹರಕೆ ಹೇಳಿಕೊಂಡ ಭಕ್ತರು ಅವುಗಳನ್ನು ಮಾರಾಟ ಮಾಡಿ, ಆ ಹಣವನ್ನು ದೇವಸ್ಥಾನಕ್ಕೆ ನೀಡುವ ಮೂಲಕ ಹರಕೆ ತೀರಿಸಬಹುದು.
- ಮಹದೇವಪ್ರಸಾದ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.