ಮಂಗಳೂರು: ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ಅವರ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ತಮಗೆ ನೆರವು ನೀಡಲು ನಿರಾಕರಿಸಿದ ಶಾಸಕ ಮತ್ತು ಅವರ ಕಾರಿನ ಚಾಲಕ ತಮ್ಮೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಕಿನ್ನಿಪದವು ನಿವಾಸಿ ಜೈನಾಬು ಎಂಬ ಮಹಿಳೆ ಬಜ್ಪೆ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.
'ಕಿನ್ನಿಪದವು ಬಳಿ ಶಾಸಕರ ಕಾರಿನ ಮಿರರ್ ತಗುಲಿ ನನ್ನ ಕೈಗೆ ಗಾಯವಾಗಿತ್ತು. ಕಾರು ನಿಲ್ಲಿಸಿದಾಗ ನೆರವು ನೀಡುವಂತೆ ಕೇಳಲು ನಾನು ಯತ್ನಿಸಿದೆ. ಆಗ ಶಾಸಕರು ನನ್ನನ್ನು ತಳ್ಳಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ' ಎಂದು ಜೈನಾಬು ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆ ನೀಡಿದ ದೂರನ್ನು ಆಧರಿಸಿ ಶಾಸಕರು ಮತ್ತು ಅವರ ಚಾಲಕನ ವಿರುದ್ಧ ಅಜಾಗರೂಕತೆಯಿಂದ ಮತ್ತು ನಿರ್ಲಕ್ಷದಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾಗಿರುವುದು, ಅಪಘಾತದಿಂದ ಗಾಯಗೊಳ್ಳಲು ಕಾರಣವಾಗಿರುವುದು ಮತ್ತು ಕೈಯಿಂದ ಹಲ್ಲೆ ನಡೆಸಿರುವ ಆರೋಪದಡಿ ಪ್ರಥಮ ಮಾಹಿತಿ ವರದಿ ( ಎಫ್ಐಆರ್) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.