ತೀರ್ಥಹಳ್ಳಿ: ಮಹಿಳಾ ರೋಗಿಯೊಬ್ಬರ ಹೊಟ್ಟೆಯಲ್ಲಿದ್ದ 8 ಕೆ.ಜಿ. ತೂಕದ ಗೆಡ್ಡೆಯನ್ನು ಪಟ್ಟಣದ ಸರ್ಕಾರಿ ಜಯಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ಈಚೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರೆ ತೆಗೆಯಲಾಗಿದೆ. ತಾಲ್ಲೂಕಿನ ಕೊಂಡ್ಲೂರು ಸಮೀಪ ದೇಗಿ ಗ್ರಾಮದ ನಾಗರತ್ನ ಅವರ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಗೆಡ್ಡೆಯನ್ನು ಜೇಸಿ ಆಸ್ಪತ್ರೆಯ ವೈದ್ಯ ಡಾ.ಶಿವಪ್ರಕಾಶ್ ಹಾಗೂ ತಂಡ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದೆ.
ರೋಗಿಯ ಹೊಟ್ಟೆಯಲ್ಲಿ ಮೂರು ತಿಂಗಳಿಂದ ಅಂಡಾಶಯದ ಗೆಡ್ಡೆ ಬೆಳೆದು ದೊಡ್ಡದಾಗುತ್ತಾ ಹೋದಂತೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ರೋಗಿಯ ಪರಿಸ್ಥಿತಿ ಮನಗಂಡ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಸವಾಲಾಗಿ ಸ್ವೀಕರಿಸಿ ಅರವಳಿಕೆ ತಜ್ಞ ಡಾ.ಗಣೇಶ್ ಭಟ್, ಶುಶ್ರೂಷಕಿ ಪ್ರಭಾ, ಡಿ ಗ್ರೂಪ್ ನೌಕರರಾದ ನಾಗರಾಜ ಹಾಗೂ ಕಿರಣ್ ಅವರ ಸಹಾಯದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು.
ಜೇಸಿ ಆಸ್ಪತ್ರೆಯ ಇತಿಹಾಸದಲ್ಲಿಯೇ ಈ ಪ್ರಕರಣ ಪ್ರಥಮ. ಗೆಡ್ಡೆಯನ್ನು ಹೆಚ್ಚಿನ ಪರೀಕ್ಷೆಗೆ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದ್ದು, ರೋಗಿ ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯ ಡಾ.ಶಿವಪ್ರಕಾಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.