ADVERTISEMENT

ರಾಮಾಯಣ: ಮುಕ್ತ ಚರ್ಚೆಗೆ ಪೇಜಾವರ ಶ್ರೀಗಳಿಂದ ಆಹ್ವಾನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 19:30 IST
Last Updated 1 ಏಪ್ರಿಲ್ 2015, 19:30 IST

ಪಡುಬಿದ್ರಿ (ಉಡುಪಿ ಜಿಲ್ಲೆ): ‘ಭಗವ ದ್ಗೀತೆ ಹಾಗೂ ರಾಮಾಯಣದ ಬಗ್ಗೆ ಮುಕ್ತವಾಗಿ ಚರ್ಚಿಸಲು ಬನ್ನಿ’ ಎಂಬ ಆಹ್ವಾನವನ್ನು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಪ್ರೊ.ಭಗವಾನ್ ಅವರಿಗೆ ಆಹ್ವಾನ ನೀಡಿದ್ದಾರೆ.

ಬುಧವಾರ ಫಲಿಮಾರಿನ ಮೂಲ ಮಠದಲ್ಲಿ ನಡೆದ ಯೋಗದೀಪಿಕಾ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪ್ರೊ. ಭಗವಾನ್ ಅವರು ರಾಮಾಯಣದ ಬಗ್ಗೆ ಅರಿತು ಮಾತಾಡಲಿ, ರಾಮಾಯಣ ಓದಿ ಇಡೀ ದೇಶದ ಉತ್ತಮ ಸಂಸ್ಕೃತಿ ಜಗತ್ತಿಗೆ ಪ್ರೇರಣೆ ದೊರೆತಿದೆ. ಏನೂ ಅರಿಯದೆ ಟೀಕೆ ಮಾಡುವುದು ಸರಿಯಲ್ಲ’ ಎಂದರು.

‘ರಾಮಾಯಣ ಅರ್ಥ ಮಾಡಿಕೊಳ್ಳದವರಿಗೆ ಶಂಬೂಕನನ್ನು ಸಂಹಾರ ಮಾಡಿದ ಬಗ್ಗೆ ಮಾತ್ರ ಗೊತ್ತು. ಶಬರಿ ಬಗ್ಗೆ ಗೊತ್ತಿಲ್ಲ. ಶಬರಿ ಪರಿಶಿಷ್ಟ ವರ್ಗದ ಮಹಿಳೆ. ಹಾಗೆ ಕೊಲ್ಲುವುದಾದರೆ ಆಕೆಯನ್ನು ಕೊಲ್ಲಬೇಕಿತ್ತು. ಉತ್ತಮ ಶೂದ್ರ ಎನ್ನುವ ಕಾರಣಕ್ಕೆ ಆಕೆಯನ್ನು ಕೊಲ್ಲಲಿಲ್ಲ. ಕೆಟ್ಟ ಆಲೋಚನೆ, ದುಷ್ಟ ಆಲೋಚನೆಗೆ ರಾಮ ಶಿಕ್ಷೆ ನೀಡಿದ್ದಾನೆ’ ಎಂದು ಹೇಳಿದರು.

‘ಇವರು ಧೈರ್ಯ ಇದ್ದರೆ ಪೈಗಂಬರರ ಬಗ್ಗೆ ಟೀಕೆ ಮಾಡಲಿ’ ಎಂದು ಸವಾಲು ಹಾಕಿದರು. ‘ರಾಮಾಯಣ, ಭಗವದ್ಗೀತೆ ಬಗ್ಗೆ ಚರ್ಚೆ ನಡೆಸಲು ಅವರಿಗೆ ನಾನು ಪತ್ರ ಬರೆಯುತ್ತೇನೆ. ಅವರಿಗೆ ಧೈರ್ಯ ಇದ್ದಲ್ಲಿ ನೇರ ಚರ್ಚೆಗೆ ಬರಲಿ’ ಎಂದು ಶ್ರೀಗಳು ಆಹ್ವಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.