ADVERTISEMENT

ರಾಯಚೂರಿನಲ್ಲಿ ಬುದ್ಧನ ಪ್ರತಿಮೆ ಧ್ವಂಸ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST
ಪೀಠದ ಹಿಂದೆ ಬಿದ್ದಿರುವ ಪ್ರತಿಮೆಯ ಭಾಗ
ಪೀಠದ ಹಿಂದೆ ಬಿದ್ದಿರುವ ಪ್ರತಿಮೆಯ ಭಾಗ   

ರಾಯಚೂರು: ನಗರ ಕೇಂದ್ರ ಗ್ರಂಥಾಲಯದ ಮುಂಭಾಗದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬುದ್ಧನ ಪ್ರತಿಮೆಯನ್ನು ಕಿಡಿಗೇಡಿಗಳು ಮಂಗಳವಾರ ರಾತ್ರಿ ಧ್ವಂಸ ಮಾಡಿದ್ದಾರೆ.

ಸುಮಾರು ನಾಲ್ಕೂವರೆ ಅಡಿ ಎತ್ತರದ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಈ ಪ್ರತಿಮೆ, ಬುದ್ಧನ ಕುಳಿತ ಭಂಗಿಯಾದಾಗಿದೆ. ಪ್ರತಿಮೆಯ ಮುಕ್ಕಾಲು ಭಾಗ ಧ್ವಂಸಗೊಂಡು ಕೆಳಗೆ ಬಿದ್ದಿದೆ.

ಪ್ರತಿಮೆ ಧ್ವಂಸಗೊಂಡಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕೆಲವು ಸಂಘ– ಸಂಸ್ಥೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

‘ಹದಿಮೂರು ವರ್ಷಗಳ ಹಿಂದೆ ಬುದ್ಧನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದೆವು. ಬುದ್ಧಪೌರ್ಣಿಮೆ ದಿನ ಪೂಜೆ ಸಹ ಮಾಡುತ್ತಿದ್ದೆವು. ಕಿಡಿಗೇಡಿಗಳು  ಒಡೆದು ಹಾಕಿದ್ದಾರೆ. ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ರವೀಂದ್ರನಾಥ ಪಟ್ಟಿ ಹೇಳಿದರು.

‘ಬುದ್ಧನ ಪ್ರತಿಮೆ ಇರುವ ಆವರಣ ಸುತ್ತ ಕಾಂಪೌಂಡ್‌ ನಿರ್ಮಿಸಲು ಸಂಸದರು ಮತ್ತು ಶಾಸಕರ ನಿಧಿಯಿಂದ ನೆರವು ಕೇಳಿದರೆ, ಈ ಜಾಗ ಅಕ್ರಮದ್ದು, ಆದ್ದರಿಂದ ನೆರವು ನೀಡಲು ಬರುವುದಿಲ್ಲ ಎನ್ನುತ್ತಾರೆ. ಆದರೆ, ಈ ಸ್ಥಳದ ಪಕ್ಕದಲ್ಲೇ ಇರುವ ಭವನಗಳ ನಿರ್ಮಾಣಕ್ಕೆ ನೆರವು ನೀಡಿದ್ದಾರೆ. ಇಂತಹ ತಾರತಮ್ಯ ಏಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.