ಹುಬ್ಬಳ್ಳಿ: ನಗರದ ನಾಲ್ವರು ಯುವತಿಯರು ಜೈನ ಸನ್ಯಾಸ ಸ್ವೀಕರಿಸಲು ಸಜ್ಜಾ ಗಿದ್ದು, ಮೇ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆಯುವ ಸಮಾರಂಭದಲ್ಲಿ ‘ವೈರಾಗಣ್’ ಆಗಲಿದ್ದಾರೆ. ದೀಕ್ಷೆಗೆ ಸಿದ್ಧರಾದ ದಿಶಾ, ಅಲ್ಫಾ, ಹರ್ಷಿತಾ ಮತ್ತು ಸುರೇಖಾ ಅವರನ್ನು ಭಾನುವಾರ ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಕಂಚಗಾರ ಗಲ್ಲಿಯ ಜೈನ ಮಂದಿರದ ಆವರಣದಿಂದ ಹೊರಟ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಂದಿರ ತಲುಪಿತು.
ನಂತರ ನಡೆದ ಸಮಾರಂಭದಲ್ಲಿ ಯುವತಿಯರಿಗೆ ಪಾಲಕರು ಮತ್ತು ಸಮಾಜದ ನೂರಾರು ಮಂದಿ ಶುಭ ಕೋರಿದರು.
‘ಸಂಸಾರ ಬಂಧನದಿಂದ ದೂರವಿದ್ದು ದೈವೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇವೆ. ಸನ್ಯಾಸ ದೀಕ್ಷೆ ಸ್ವೀಕರಿಸದೆ ಇದು ಸುಲಭವಲ್ಲ. ಇನ್ನು ಮುಂದೆ ಅಧ್ಯಾತ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡು ವ್ರತಾನುಷ್ಠಾನ ಕೈಗೊಳ್ಳಲಿದ್ದೇವೆ’ ಎಂದು ಯುವತಿಯರು ತಿಳಿಸಿದರು.
‘ಜೈನ ಧರ್ಮದ ಆಚರಣೆ, ಸಂಪ್ರದಾಯದ ಬಗ್ಗೆ ಹೆಚ್ಚು ಆಸಕ್ತರಾಗಿ ಅಧ್ಯಯನ ಕೈಗೊಂಡಿದ್ದೇವೆ. ಲೋಕ ಕಲ್ಯಾಣಕ್ಕಾಗಿ ಜೀವನ ಮುಡಿಪಾಗಿಡಲು ಮುಂದಾಗಿದ್ದೇವೆ. ಹೆತ್ತವರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದು ಕಠಿಣ ನಿರ್ಧಾರ. ಆದರೆ ಇದರಲ್ಲಿ ಶ್ರೇಯಸ್ಸು ಇದೆ ಎಂಬ ನಂಬಿಕೆ ನಮ್ಮದು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.