ಬೆಂಗಳೂರು: ರಾಜ್ಯ ಸರ್ಕಾರಿ ನೌಕರಿಗೆ ಪರಿಷ್ಕೃತ ವೇತನ ಜಾರಿ ಸಂಬಂಧ ಚುನಾವಣಾ ಆಯೋಗದಿಂದ ನಿರಾಕ್ಷೇಪಣಾ ಪತ್ರ ಪಡೆಯಲು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ (ಸಿಇಒ) ಏಪ್ರಿಲ್ 3 ರಂದು ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.
ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿಗಳನ್ನು 2017 ರ ಜುಲೈ 1 ರಿಂದ ಪರಿಷ್ಕರಿಸಲಾಗಿದೆ. ನೌಕರರಿಗೆ ಈ ಸಾಲಿನ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಆರ್ಥಿಕ ಸೌಲಭ್ಯವನ್ನು ನೀಡಲು ಮಾರ್ಚ್ 1 ರಂದೇ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಇದಕ್ಕೆ ಮಾರ್ಚ್ 2 ರಂದೇ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.
ವೇತನ ಪರಿಷ್ಕರಣೆಗೆ ಸಂಬಂಧಿಸಿ ವಿವರವಾದ ನಿಯಮಗಳನ್ನು ಹಾಗೂ ಫಿಟ್ಮೆಂಟ್ ಕುರಿತ ಕೋಷ್ಠಕ ರೂಪಿಸಲಾಗುತ್ತಿದೆ. ಈ ಕುರಿತ ಆದೇಶಗಳನ್ನು ಹೊರಡಿಸಲು ಚುನಾವಣಾ ಆಯೋಗದಿಂದ ನಿರಾಪೇಕ್ಷಣಾ ಪತ್ರದ ಅಗತ್ಯವಿದೆ. ಸಿಇಒ ಕಚೇರಿಯಿಂದ ಅನುಮತಿ ದೊರೆತ ಕೂಡಲೇ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.