ಬೆಂಗಳೂರು: ‘ಒಬ್ಬ ಅಯೋಗ್ಯ ಮುಖ್ಯಮಂತ್ರಿ ಅಧಿಕಾರದಿಂದ ಹೋಗುವಾಗ ಇಡೀ ಸಮಾಜವನ್ನು ಅಲ್ಲೋಲಕಲ್ಲೋಲ ಮಾಡುತ್ತಿದ್ದಾನೆ. ಮಾಡಬಾರದ್ದನ್ನು ಮಾಡಿ ಹೋಗುತ್ತಿದ್ದಾನೆ’ ಎಂದು ಸಿದ್ದರಾಮಯ್ಯ ವಿರುದ್ಧ ಬಾಲೆ ಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ತೀವ್ರ ವಾಗ್ದಾಳಿ ನಡೆಸಿದರು.
ಸೋಮವಾರ ನಗರದಲ್ಲಿ ಆಯೋಜಿಸಿದ್ದ ಸರ್ಪಭೂಷಣ ಶಿವಯೋಗಿಗಳ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಕ್ಷಸರ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಬಹಳಷ್ಟು ದುರಂತದ ಸಂಗತಿ ನಡೆಯುತ್ತಿದೆ. ಬಸವಣ್ಣನವರು ಇಂದು ಬದುಕಿದ್ದರೆ ಸಿದ್ದರಾಮಯ್ಯನ ವಿರುದ್ಧ ಮತ್ತು ಅವರ ಬೆನ್ನಿಗಿರುವವರ ವಿರುದ್ಧ ದೊಡ್ಡ ಹೋರಾಟ ನಡೆಸುತ್ತಿದ್ದರು. ಹೀಗೆ ಧರ್ಮ ನಾಶ ಮಾಡಲು ಬಂದ ಎಷ್ಟೋ ಜನರು ಸುಟ್ಟು ಬೂದಿಯಾದ ಚರಿತ್ರೆ ಈ ನಾಡಿನಲ್ಲಿದೆ ಎಂದು ನೆನಪಿಸಿದರು.
‘ನಾವು ಆತಂಕಕ್ಕೆ ಒಳಗಾಗುವುದು ಬೇಡ. ಈಗಿನ ಪುರಸ್ಕಾರ ಮುಂದೊಮ್ಮೆ ತಿರಸ್ಕಾರಕ್ಕೆ ಒಳಗಾಗಬಹುದು. ನಾವು ಯಾವುದಕ್ಕೂ ಬಗ್ಗದೆ ವೀರಶೈವ ಧರ್ಮವನ್ನು ರಕ್ಷಿಸಿಕೊಳ್ಳಬೇಕಾದ ಕಾಲ ಬಂದಿದೆ’ ಎಂದರು.
‘ದೈತ್ಯ ಶಕ್ತಿ ಮೊದಲು ಗೆದ್ದಂತೆ ಕಾಣಿಸುತ್ತದೆ. ಆದರೆ, ನಂತರ ಗೆಲ್ಲುವುದು ಸಾತ್ವಿಕ ಶಕ್ತಿಯೇ. ಆದರೆ, ಆ ದೈತ್ಯ ಶಕ್ತಿ ಜತೆಗೆ ನಮ್ಮವರೂ ಕೆಲವರು ಸೇರಿಕೊಂಡಿದ್ದಾರೆ. ಈಗ ಪ್ರತ್ಯೇಕ ಧರ್ಮದ ಪ್ರತಿಪಾದನೆ ಮಾಡುತ್ತಿರುವ ಪ್ರಮುಖ ಸ್ವಾಮೀಜಿ, ಮಠದ ಆಸ್ತಿ ಮಾರಿದಷ್ಟು, ಯಾವ ಸ್ವಾಮೀಜಿಯೂ ಮಾರಾಟ ಮಾಡಿರಲಿಲ್ಲ. ಸ್ವಾಮೀಜಿಗಳೆಂದರೆ ಕಾಯಕ ಮಾಡಿ, ಧರ್ಮದ ಕೆಲಸ ಮಾಡಿ ಜೀವಿಸಬೇಕು. ಆದರೆ, ಇವರು ಮಠದ ಆಸ್ತಿ ಮಾರಿ ಅಯೋಗ್ಯ ಸ್ವಾಮೀಜಿ ಎನಿಸಿದ್ದಾರೆ. ಕೆಟ್ಟ ಸ್ವಾಮೀಜಿಗಳು ಮತ್ತು ಸ್ವಾರ್ಥ ಭಕ್ತರಿಂದ ರಾಜ್ಯದಲ್ಲಿ ಕೆಲವು ಮಠಗಳು ಹಾಳಾಗಿವೆ’ ಎಂದು ಕಿಡಿಕಾರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.