ಬೆಂಗಳೂರು: ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಚರ್ಚಿಸಲು ಇಂದು ಬೆಳಗ್ಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ನಾಯಕರ ಸಭೆ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ ಶೆಟ್ಟರ್, ವೈಎಸ್ ವಿ ದತ್ತಾ ಭಾಗಿಯಾಗಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಏನೇನಾಯ್ತು?
ನಾಳೆಯವರೆಗೆ ನೀರು ಬಿಡಬೇಡಿ. ನಾಳೆಯವರಗೆ ಕಾದು ನೋಡೋಣ ಎಂದು ಸರ್ವ ಪಕ್ಷಗಳು ಅಭಿಪ್ರಾಯ ತಿಳಿಸಿವೆ.
ಸರ್ವಪಕ್ಷಗಳ ನಾಯಕರ ಅಭಿಪ್ರಾಯವನ್ನು ಆಲಿಸಿದ ಮುಖ್ಯಮಂತ್ರಿ ಅವರು ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ತಮಿಳುನಾಡಿಗೆ ನಾಳೆಯವರೆಗೆ ನೀರು ಹರಿಯಬಿಡದಿರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದೇ ವೇಳೆ ನಾಳೆ ನವದೆಹಲಿಯಲ್ಲಿ ನಡೆಯಲಿರುವ ಸಂಧಾನ ಸಭೆಯ ನಂತರವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ,
ಸಿಎಂ ಏನಂತಾರೆ?
ಸರ್ವ ಪಕ್ಷ ಸಭೆ ಮುಗಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಹಿತಕ್ಕೆ ಪೂರಕವಾದ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ. ಸರ್ವಪಕ್ಷಗಳ ನಾಯಕರ ಅಭಿಪ್ರಾಯವನ್ನು ಸರ್ಕಾರ ಸಕಾರಾತ್ಮಕಾಗಿ ತೆಗೆದುಕೊಂಡಿದೆ. ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಎಲ್ಲರ ಸಲಹೆಗಳನ್ನು ಮಂತ್ರಿ ಪರಿಷತ್ ಸಭೆಯಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.
ನಾಯಕರು ಏನಂತಾರೆ?
ಈ ಸಭೆಯಲ್ಲಿ ಚರ್ಚೆಯಾದ ಸಂಗತಿಗಳನ್ನು ಸಚಿವ ಸಂಪುಟ ಸಭೆಯ ಮುಂದಿಡಲಾಗುವುದು. ಕಾನೂನು ತಜ್ಞರ ಜತೆ ಸಂವಾದ ನಡೆಸಿದ ನಂತರವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು
-ಟಿ.ಬಿ ಜಯಚಂದ್ರ
ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪಿನ ಭಾಷೆಯನ್ನು ನಾವು ಸಭೆಯ ಗಮನಕ್ಕೆ ತಂದಿದ್ದೇವೆ. ಸರ್ವಾನುಮತದ ನಿರ್ಣಯ ಸುಪ್ರೀಂಕೋರ್ಟ್ ನ್ಯಾಯಪೀಠಕ್ಕೆ ಹಿಡಿಸಲಿಲ್ಲ ಎಂದು ಕಾಣುತ್ತದೆ, ತಮಿಳುನಾಡಿಗೆ ನೀರು ಬಿಡಿ ಎಂದಿದ್ದರೂ, ಸುಪ್ರೀಂ ಮೃದುಧೋರಣೆ ತಳೆದುಕೊಂಡಿದೆ ಎಂಬಂತೆ ತೋರುತ್ತಿದೆ
-ವೈಎಸ್ವಿ ದತ್ತಾ
ನಾಳೆಯವರೆಗೆ ನೀರು ಬಿಡಬಾರದು ಎಂದು ನಾವು ಸರ್ಕಾರಕ್ಕೆ ಹೇಳಿದ್ದೇವೆ. ಸಚಿವ ಸಂಪುಟ ಸಭೆಯ ನಂತರವೇ ಮುಂದಿನ ತೀರ್ಮಾನ
- ವಿಪಕ್ಷ ನಾಯಕ ಜಗದೀಶ್ ಶೆಟ್ಟರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.