ಬೆಳಗಾವಿ: ತಾಲ್ಲೂಕಿನ ಯಳ್ಳೂರಿನಲ್ಲಿ ‘ಮಹಾರಾಷ್ಟ್ರ ರಾಜ್ಯ’ ನಾಮಫಲಕ ತೆರವುಗೊಳಿಸಿದ ಬಳಿಕ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರ ಪುಂಡಾಟಿಕೆಯಿಂದ ಉದ್ವಿಗ್ನಗೊಂಡಿದ್ದ ಗ್ರಾಮವು ಸೋಮವಾರ ಸಹಜ ಸ್ಥಿತಿಯತ್ತ ಮರಳಿತು.
ಗ್ರಾಮದಲ್ಲಿ ಭಾನುವಾರ ರಾತ್ರಿಯವರೆಗೂ ಅಘೋಷಿತ ಬಂದ್ ವಾತಾವರಣವಿತ್ತು. ಸೋಮವಾರ ಸಹಜ ಸ್ಥಿತಿ ಇದ್ದರೂ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೆಲವು ಅಂಗಡಿಗಳು ಅರ್ಧ ಬಾಗಿಲು ತೆರೆದು ವಹಿವಾಟು ನಡೆಸಿದವು. ರೈತರು ಹೊಲಗಳಿಗೆ ತೆರಳಿ ಸೈಕಲ್– ಮೋಟರ್ ಬೈಕ್ಗಳ ಮೇಲೆ ಜಾನುವಾರುಗಳಿಗೆ ಮೇವು ತರುತ್ತಿದ್ದುದು ಸಾಮಾನ್ಯವಾಗಿತ್ತು.
ಯಳ್ಳೂರ ರಸ್ತೆಯಲ್ಲಿ ನಾಕಾ ಬಂದಿ ವಿಧಿಸಿದ್ದ ಪೊಲೀಸರು, ಪ್ರಯಾಣಿಕರ ಮಾಹಿತಿ ಹಾಗೂ ವಾಹನಗಳ ಸಂಖ್ಯೆಯನ್ನು ದಾಖಲಿಸಿಕೊಂಡು ಓಡಾಟಕ್ಕೆ ಸೋಮವಾರ ಅವಕಾಶ ನೀಡಿದರು.
ಗ್ರಾಮದ ಹೊರವಲಯದಲ್ಲಿ ನಾಮಫಲಕವಿದ್ದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಪ್ರೀತಂ ನಸಲಾಪುರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಸಂಭಾಜಿ ಪಾಟೀಲ, ಮಾಜಿ ಶಾಸಕ ಮನೋಹರ ಕಿಣೇಕರ ಗ್ರಾಮಕ್ಕೆ ಬಂದು ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ನಾಮಫಲಕಗಳ ತೆರವು
ಖಾನಾಪುರ: ತಾಲ್ಲೂಕಿನ ಗರ್ಲಗುಂಜಿ, ನಿಡಗಲ್, ಹಲಶಿವಾಡಿ ಹಾಗೂ ಸಣ್ಣ ಹೊಸೂರು ಗ್ರಾಮಗಳಲ್ಲಿ ಶನಿವಾರ ರಾತ್ರೊರಾತ್ರಿ ನಿರ್ಮಿಸಿದ್ದ ಅನಧಿಕೃತ ನಾಮಫಲಕಗಳನ್ನು ತಹಶೀಲ್ದಾರ್ ಎಂ.ಎನ್.ಗೋಟೆ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಶೇಖರಪ್ಪ ನೇತೃತ್ವದಲ್ಲಿ ಭಾನುವಾರ ಸಂಜೆ ತೆರವುಗೊಳಿಸಲಾಯಿತು.
ಆದರೆ, ಮಧ್ಯರಾತ್ರಿಯ ಬಳಿಕ ಗರ್ಲಗುಂಜಿ, ಮಂತುರ್ಗಾ ಹಾಗೂ ಕುಪ್ಪಟಗಿರಿ ಗ್ರಾಮಗಳಲ್ಲಿ ಕಿಡಿಗೇಡಿಗಳು ಮತ್ತೆ ನಾಮಫಲಕವನ್ನು ನಿರ್ಮಿಸಿದ್ದರು. ಸೋಮವಾರ ಬೆಳಿಗ್ಗೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ, ಇವುಗಳನ್ನೂ ತೆರವುಗೊಳಿಸಿದರು.
ಬೆಳಗಾವಿ ತಾಲ್ಲೂಕಿನ ಬಿ.ಕೆ. ಕಂಗ್ರಾಳಿ, ಮನ್ನೂರು, ಅಂಬೇಡಿವಾಡಿ ಹಾಗೂ ಉಚಗಾಂವ ಗ್ರಾಮಗಳಲ್ಲಿ ಭಾನುವಾರ ಹಾಕಲಾಗಿದ್ದ ‘ಮಹಾರಾಷ್ಟ್ರ ರಾಜ್ಯ’ ಎಂಬ ನಾಮಫಲಕಗಳನ್ನು ಜಿಲ್ಲಾಡಳಿತವು ಪೊಲೀಸ್ ಭದ್ರತೆಯಲ್ಲಿ ಸೋಮವಾರ ತೆರವುಗೊಳಿಸಿದೆ.
ಬ್ಯಾಂಕ್ಗೆ ಮುತ್ತಿಗೆ
ಗದಗ: ಬೆಳಗಾವಿ ತಾಲ್ಲೂಕಿನ ಯಳ್ಳೂರ ಗ್ರಾಮದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಡೆಸಿದ ಪುಂಡಾಟಿಕೆ ಖಂಡಿಸಿ ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಗೆ ಕರ್ನಾಟಕ ಜನಹಿತ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿದರು.
ಸದಸ್ಯತ್ವ ರದ್ದತಿಗೆ ಒತ್ತಾಯ
ಬೆಳಗಾವಿ: ನಾಮಫಲಕಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆಗಳ ಮೂಲಕ ರಾಜ್ಯ ವಿರೋಧಿ ಚಟುವಟಿಕೆ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಶಾಸಕರಾದ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದ್ದಾರೆ.
ಬಂದ್ಗೆ ನೀರಸ ಪ್ರತಿಕ್ರಿಯೆ
ನಿಪ್ಪಾಣಿ: ಯಳ್ಳೂರಿನಲ್ಲಿ ನಾಮಫಲಕ ತೆರವುಗೊಳಿಸಿರುವುದನ್ನು ಖಂಡಿಸಿ ಎಂಇಎಸ್ ಹಾಗೂ ಶಿವಸೇನೆ ಸೋಮವಾರ ಕರೆ ನೀಡಿದ್ದ ನಿಪ್ಪಾಣಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಸ್, ಆಟೊ ಸಂಚಾರ ಮಾಮೂಲಿನಂತಿತ್ತು. ಶಾಲಾ– ಕಾಲೇಜು, ಸರ್ಕಾರಿ ಕಚೇರಿಗಳೂ ಕಾರ್ಯನಿರ್ವಹಿಸಿದವು. ಕೆಲವೆಡೆ ಸ್ವಯಂ ಪ್ರೇರಣೆಯಿಂದ ಅಂಗಡಿ– ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.