ADVERTISEMENT

‘ಸಿಬಿಎಸ್‌ಇ ಪಠ್ಯ ಯಥಾವತ್ ಕನ್ನಡದಲ್ಲಿ: ಅವೈಜ್ಞಾನಿಕ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2016, 19:30 IST
Last Updated 11 ಡಿಸೆಂಬರ್ 2016, 19:30 IST

ಬೆಂಗಳೂರು:  ‘ಪ್ರೌಢಶಾಲೆಯ 9 ಮತ್ತು 10 ನೇ ತರಗತಿಗೆ ಸಿಬಿಎಸ್‌ಇ ಪಠ್ಯಕ್ರಮವನ್ನು ಯಥಾವತ್ ಕನ್ನಡಕ್ಕೆ ಭಾಷಾಂತರ ಮಾಡಿ ಬೋಧಿಸಲು ನಿರ್ಧರಿಸಿರುವುದು ಅವೈಜ್ಞಾನಿಕ ಮತ್ತು ಅವಿವೇಕದ ನಿರ್ಧಾರ’ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಟೀಕಿಸಿದ್ದಾರೆ.

‘ಸಿಬಿಎಸ್‌ಇ ಪಠ್ಯ ಯಥಾವತ್ ಕನ್ನಡಕ್ಕೆ’ ಎಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯ ವಿಷಯದ (ವಿಜ್ಞಾನ, ಗಣಿತ, ಸಮಾಜ ವಿಜ್ಞಾನ) ಪಠ್ಯಗಳಲ್ಲಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಏನನ್ನು ಬೋಧಿಸಲಾಗುತ್ತದೋ ಅದನ್ನೇ ಕನ್ನಡಕ್ಕೆ ಅನುವಾದ ಮಾಡಿ ಇಲ್ಲಿನ ವಿದ್ಯಾರ್ಥಿಗಳಿಗೆ ಬೋಧಿಸಬೇಕು ಎಂದು ಅಧಿಕಾರಿಗಳು ತೆಗೆದುಕೊಂಡಿರುವ ತೀರ್ಮಾನ. ಸರ್ಕಾರ ಯಾರೊಬ್ಬರ ಅಭಿಪ್ರಾಯವನ್ನೂ ಕೇಳದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರತಿ ರಾಜ್ಯದ ಭಾಷೆ, ಸಂಸ್ಕೃತಿ, ಬಹುತ್ವ ಪದ್ಧತಿಗಳು ಆ ರಾಜ್ಯದ ಪಠ್ಯಕ್ರಮದಲ್ಲಿ ಇರಬೇಕು ಎಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಹೇಳುತ್ತದೆ. ಆದರೆ, ಸಿಬಿಎಸ್‌ಇ ಪಠ್ಯಗಳಲ್ಲಿ ನಮ್ಮ ರಾಜ್ಯದ ಯಾವುದೇ ಚಿತ್ರಣ ಇರುವುದಿಲ್ಲ. ಇಂತಹ ಪಠ್ಯ ಬೋಧಿಸುವುದು ಅತ್ಯಂತ ಕೆಟ್ಟ ನಿರ್ಧಾರ ಎಂದು ಹೇಳಿದ್ದಾರೆ.

ADVERTISEMENT

ರಾಜ್ಯದ ವಿದ್ಯಾರ್ಥಿಗಳಿಗೆ ಬೋಧಿಸುವ ಪಠ್ಯಗಳು ಸಿಬಿಎಸ್‌ಇ ಪಠ್ಯಗಳಿಗೆ ಸಮಾನ ಗುಣಮಟ್ಟ ಹೊಂದಿರಬೇಕು ಹೊರತು ಅದೇ ಆಗಿರಬೇಕು ಎಂಬ ನಿರ್ಧಾರದಲ್ಲಿ ಅರ್ಥವಿಲ್ಲ. ಅದಕ್ಕಾಗಿ ಎನ್‌ಸಿಎಫ್‌ ಮಾದರಿ ರಾಜ್ಯ ಪಠ್ಯಕ್ರಮ ಚೌಕಟ್ಟು ರೂಪಿಸಿ ಆ ಮೂಲಕ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.