ಮದ್ದೂರು: ಜೀವನದಲ್ಲಿ ಬೇಸತ್ತ ವೃದ್ಧೆಯೊಬ್ಬರು ಸ್ವತಃ ಚಿತೆ ಸಿದ್ಧಪಡಿಸಿ, ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ತೈಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ನಿವೃತ್ತ ರೈಲ್ವೆ ಸ್ಟೇಷನ್ ಮಾಸ್ಟರ್ ಸಿದ್ದಪ್ಪ ಪತ್ನಿ ಚಿಕ್ಕತಾಯಮ್ಮ (70) ಸಜೀವ ದಹನವಾದ ವೃದ್ಧೆ.
ಮಂಗಳವಾರ ರಾತ್ರಿ ಮನೆಯ ಹಿತ್ತಲಿನಲ್ಲಿ ತಾವೇ ಸೌದೆಗಳಿಂದ ಚಿತೆ ಸಿದ್ಧಪಡಿಸಿಕೊಂಡಿದ್ದರು. ಬಳಿಕ ಅಂತ್ಯಸಂಸ್ಕಾರಕ್ಕೆ ಬೇಕಾದ ಹೂವು, ಗಂಧದಕಡ್ಡಿ ಇತರ ಪೂಜಾ ಸಾಮಗ್ರಿಗಳನ್ನು ಚಿತೆಯ ಬದಿಯಲ್ಲಿರಿಸಿ ಚಿತೆ ಏರಿ ಸೀಮೆಎಣ್ಣೆ ಸುರಿದುಕೊಂಡ ತಕ್ಷಣ ಬೆಂಕಿ ಹಚ್ಚಿಕೊಂಡು ಸಜೀವ ದಹನವಾಗಿದ್ದಾರೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.
ಮನೆಯ ಹಿಂಭಾಗದಲ್ಲಿ ಬೆಂಕಿ ಉರಿಯುತ್ತಿರುವುದನ್ನು ಮಧ್ಯರಾತ್ರಿ ವೇಳೆಗೆ ನೋಡಿದ ನೆರೆಹೊರೆಯವರು ಸ್ಥಳಕ್ಕೆ ಹೋದಾಗ ಚಿಕ್ಕತಾಯಮ್ಮ ಸಜೀವ ದಹನವಾಗಿದ್ದರು ಎಂದು ಹೇಳಲಾಗಿದೆ.
ಗ್ರಾಮಸ್ಥರು ಚಿಕ್ಕತಾಯಮ್ಮ ಅವರ ಆತ್ಮಾಹುತಿ ಸುದ್ದಿಯನ್ನು ಅವರ ಮಕ್ಕಳು ಹಾಗೂ ಸಂಬಂಧಿಕರಿಗೆ ತಿಳಿಸಿದರು. ಈ ಸಂಬಂಧ ಮೃತರ ಪುತ್ರ ರಂಗನಾಥ್ ಅವರು ‘ನಮ್ಮ ತಾಯಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.