ಬೆಳಗಾವಿ: ‘ಈಗಾಗಲೇ ಘೋಷಣೆ ಮಾಡಿರುವ 50 ಹೊಸ ತಾಲ್ಲೂಕುಗಳು ಜನವರಿ 1 ರಿಂದ ಅಸ್ತಿತ್ವಕ್ಕೆ ಬರಲಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆ ಮುಂದುವರಿದಿದೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್ಸಿನ ರಘುಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಹೊಸ ತಾಲ್ಲೂಕುಗಳ ರಚನೆಗೆ ಈಗಾಗಲೇ ತಾತ್ವಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹಣ ಕೂಡಾ ಒದಗಿಸಲಾಗಿದೆ’ ಎಂದರು.
‘ಹೊಸ ತಾಲ್ಲೂಕು ರಚನೆ ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯಗಳ ಜೊತೆಗೆ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸುತ್ತದೆ. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಹೋಬಳಿಯನ್ನು ಹೊಸ ತಾಲ್ಲೂಕು ಆಗಿ ಘೋಷಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸಲಾಗುವುದು’ ಎಂದು ಸಚಿವರು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕಳಶ ಹೋಬಳಿಯನ್ನುತಾಲ್ಲೂಕು ಆಗಿ ಘೋಷಿಸಬೇಕು ಎಂದು ಬಿಜೆಪಿಯ ಸಿ.ಟಿ. ರವಿ ಮತ್ತು ಡಿ.ಎನ್. ಜೀವರಾಜ ಆಗ್ರಹಿಸಿದರು. ಇನ್ನೂ ಕೆಲವು ಶಾಸಕರು ಹೊಸ ತಾಲ್ಲೂಕುಗಳ ರಚನೆ ಕುರಿತು ಬೇಡಿಕೆ ಮಂಡಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕಾಗೋಡು ಭರವಸೆ ನೀಡಿದರು.
ಹೊಸ ಉಪವಿಭಾಗಗಳ ರಚನೆ: ರಾಜ್ಯದಲ್ಲಿ ಹೊಸ ಉಪವಿಭಾಗಗಳನ್ನು ರಚಿಸುವ ಕುರಿತು ಒಟ್ಟು 11 ಪ್ರಸ್ತಾವನೆಗಳು ಬಂದಿವೆ. ಉಪ ವಿಭಾಗ ರಚನೆಗೆ ತಲಾ ₹ 7.70 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಒಟ್ಟು ₹ 84.70 ಕೋಟಿ ಅಗತ್ಯವಿದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡಿ ಹೊಸ ಉಪವಿಭಾಗ ರಚಿಸಲಾಗುವುದು’ ಎಂದೂ ಕಾಗೋಡು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.