ಗುರುಮಠಕಲ್ (ಯಾದಗಿರಿ ಜಿಲ್ಲೆ): ‘ಗಡಿಭಾಗದಲ್ಲಿರುವ ಗುರುಮಠಕಲ್ ಮತ್ತಿತರ ಪ್ರದೇಶದಲ್ಲಿ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದೆ. ಇಂತಹ ಸ್ಥಿತಿಯಲ್ಲಿಯೂ ಕನ್ನಡ ಸಾಹಿತ್ಯಕ್ಕೆ ಅಗತ್ಯ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಕನ್ನಡ ಸಾಹಿತ್ಯ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುವ ಅಗತ್ಯವಿದೆ’ ಎಂದು ಬೆಂಗಳೂರಿನ ಹಿರಿಯ ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಅವರು ಹೇಳಿದರು.
ಪಟ್ಟಣದ ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘದ ವತಿಯಿಂದ ದಿ. ಕಿಶನ್ರಾವ್ ಮಹೇಂದ್ರಕರ್ ಸ್ಮರಣಾರ್ಥ ನೀಡುವ ರಾಜ್ಯಮಟ್ಟದ ‘ಅಕ್ಷರ ಲೋಕದ ನಕ್ಷತ್ರ’ ಪ್ರಶಸ್ತಿಯನ್ನು ಭಾನುವಾರ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಶಸ್ತಿ ಪುರಸ್ಕೃತ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎಚ್.ಟಿ ಪೋತೆ ಮಾತನಾಡಿ, ನಾವು ಮಾಡುವ ಸಾಧನೆ ಸಮಾಜಕ್ಕೆ ಉಪಯೋಗವಾಗಬೇಕು. ಆಗ ಮಾತ್ರ ನಾವು ಸಮಾಜದಲ್ಲಿ ಸತ್ವಯುತವಾಗಿ ಬದುಕಲು ಸಾಧ್ಯ ಎಂದು ಹೇಳಿದರು.
ಪ್ರೊ.ಎಚ್.ಟಿ ಪೋತೆ ಮತ್ತು ಬಿ.ಆರ್ ಲಕ್ಷ್ಮಣರಾವ್ ಅವರಿಗೆ ತಲಾ ₨5 ಸಾವಿರ ನಗದು, ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಖಾಸಾಮಠ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್ಯ ಸಮಾಜ ಕರ್ನಾಟಕ ಪ್ರಾಂತ ಅಧ್ಯಕ್ಷ ಸುಭಾಸ ಅಷ್ಟೇಕರ ಕಾರ್ಯಕ್ರಮ ಉದ್ಘಾಟಿಸಿದರು. ವಸಂತರಾವ್ ಮಹೇಂದ್ರಕರ್ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.