ADVERTISEMENT

‘ಶನಿ ತೊಲಗಿಸಬೇಕು...’

ವಿಧಾನ ಮಂಡಲದಲ್ಲಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:46 IST
Last Updated 30 ಜುಲೈ 2015, 19:46 IST

ಬೆಂಗಳೂರು: ಲೋಕಾಯುಕ್ತ ತಿದ್ದುಪಡಿ ಮಸೂದೆ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ‘ಸದ್ಯದ ಸ್ಥಿತಿಯಲ್ಲಿ ಏನಾದರೂ ಒಂದು ತೀರ್ಮಾನ ಮಾಡಬೇಕು. ಈಗಿರುವ ಶನಿ ತೊಲಗಿಸಬೇಕು’ ಎಂದು ಹೇಳಿದರು.

ಮಸೂದೆ ಕುರಿತು ಶೆಟ್ಟರ್ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಮಾತನಾಡುತ್ತಿದ್ದರು. ಆಗ ಕಾಗೋಡು ತಿಮ್ಮಪ್ಪ ಅವರು, ‘ಲೋಕಾಯುಕ್ತದ ಇಂದಿನ ಸ್ಥಿತಿ ನೋಡಿ ನಾವು ತಲೆ ತಗ್ಗಿಸುವಂತೆ ಆಗಿದೆ. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಈಗ ಒಂದಾಗಬೇಕು. ನ್ಯಾಯ ಎತ್ತಿಹಿಡಿಯುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಜನ ನಗುತ್ತಾರೆ’ ಎಂದು ಎಚ್ಚರಿಸಿದರು.

ಏಕೆ ಪರಿಷ್ಕರಣೆ?: ‘113 ಸದಸ್ಯರ ಸಮ್ಮತಿ ಇದ್ದರೆ ಲೋಕಾಯುಕ್ತರನ್ನು ಪದಚ್ಯುತಿ ಮಾಡಬಹುದು ಎಂಬ ಅಂಶ ಸರಿಯಲ್ಲ. ಮುಂದೊಂದು ದಿನ  ಸರ್ಕಾರಕ್ಕೆ ಒಬ್ಬ ವ್ಯಕ್ತಿ ಲೋಕಾಯುಕ್ತ ಸ್ಥಾನದಲ್ಲಿರುವುದು ಬೇಡವಾದರೆ, ಅವರನ್ನು ಪದಚ್ಯುತಿಗೊಳಿಸಲು ಅವಕಾಶ ದೊರೆಯುತ್ತದೆ. ಮೂರನೆಯ ಎರಡರಷ್ಟು ಸದಸ್ಯರ ಸಮ್ಮತಿ ಬೇಕು ಎಂಬ ಅಂಶ ಇದ್ದರೆ, ಆಡಳಿತ ಪಕ್ಷವೊಂದರಿಂದಲೇ ಲೋಕಾಯುಕ್ತರ ಪದಚ್ಯುತಿ ಆಗದು’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

ನೆರೆಯ ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶ ರಾಜ್ಯಗಳ ಲೋಕಾಯುಕ್ತ ಕಾಯ್ದೆಗಳಲ್ಲಿ ‘ಮೂರನೆಯ ಎರಡರಷ್ಟು’ ಎಂಬ ಅಂಶವೇ ಇದೆ ಎಂದು ಶೆಟ್ಟರ್‌ ವಿವರಿಸಿದರು.

‘‍ಪದಚ್ಯುತಿ ನಿರ್ಣಯ ಮಂಡನೆಗೆ ಅವಕಾಶ ಕೋರಿ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ ನಂತರ, ಲೋಕಾಯುಕ್ತರು ಕರ್ತವ್ಯ ನಿರ್ವಹಿಸುವಂತಿಲ್ಲ ಎಂದು ಮಸೂದೆಯಲ್ಲಿದೆ. ಅದಕ್ಕೆ ಸಣ್ಣ ತಿದ್ದುಪಡಿಯೊಂದನ್ನು ತಂದು, ಅರ್ಜಿ ಸಲ್ಲಿಸಿದ ಕ್ಷಣದಿಂದ ಲೋಕಾಯುಕ್ತರು ಸ್ಥಾನದಲ್ಲಿ ಮುಂದುವರಿಯುವಂತಿಲ್ಲ ಎಂಬ ನಿಯಮವನ್ನು ಈಗಿನ ಲೋಕಾಯುಕ್ತರಿಗೆ ಸೀಮಿತವಾಗಿ ಮಾತ್ರ ಮಾಡೋಣ’ ಎಂಬ ಸಲಹೆ ಬಿಜೆಪಿಯ ಎಸ್‌. ಸುರೇಶ್‌ ಕುಮಾರ್ ಅವರಿಂದ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.