ಬೆಂಗಳೂರು: 2014ನೇ ಸಾಲಿನ 464 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದ್ದು ಅಂಗವಿಕಲರ ಕೋಟಾದಲ್ಲೂ ವಂಚನೆಯಾಗಿರುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕ ಎಸ್. ಸುರೇಶ್ ಕುಮಾರ್ ದೂರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು ಪೇಸ್ಬುಕ್ನಲ್ಲಿ ಪ್ರಕರಣವೊಂದನ್ನು ಉಲ್ಲೇಸಿದ್ದಾರೆ. ತಮ್ಮ ಬಳಿ ಅಂಗವಿಕಲ ಅಭ್ಯರ್ಥಿಯೊಬ್ಬ ಬಂದು ತನಗೆ ವಂಚನೆಯಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಇದಕ್ಕೆ ಹಗರಣ ಎಂದರೂ ತಪ್ಪಾಗಲಾರದು.
ಮೊದಲ ಚಿತ್ರದಲ್ಲಿರುವ ಯುವಕನ ಹೆಸರು ಬಿ. ಸುಭಾಶ್. ಇಂದು ನನ್ನ ಕಚೇರಿಗೆ ಬಂದು ತನಗೆ ಕರ್ನಾಟಕ ಲೋಕಸೇವಾ ಆಯೋಗ "ಮಾಡಿರುವ" ಅನ್ಯಾಯವನ್ನು ವಿವರಿಸಿದ.
ಬಲಗೈ ಇಲ್ಲದ ಸುಭಾಶ್ ವಿಕಲಚೇತನ ಕೋಟಾ ಅಡಿ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಪಾಲ್ಗೊಂಡು ಉದ್ಯೋಗ ಬಯಸಿದ್ದ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸಂದರ್ಶನಕ್ಕೂ ಹಾಜರಾಗಿದ್ದ. ಅಸಿಸ್ಟೆಂಟ್ ಕಮಿಷನರ್ (ರೆವಿನ್ಯೂ) ಮತ್ತು ಸಿ.ಟಿ.ಓ. -ಎರಡು ಹುದ್ದೆಗಳು ಲಭ್ಯವಿದ್ದವು. ವಿಕಲಚೇತನ ಕೋಟಾದಡಿ ಅರ್ಹರಾಗಿದ್ದ ಅಭ್ಯರ್ಥಿಗಳು ಮೂರು.
ಆದರೆ ಬಲಗೈ ಕಳೆದುಕೊಂಡ ಸುಭಾಶ್ ಗೆ ಉದ್ಯೋಗ ನೀಡುವುದರಲ್ಲಿ ವಂಚನೆಯಾಗಿದೆಯೆಂದು ತನ್ನ ಅಳಲು ತೋಡಿಕೊಂಡ.
ಬದಲಿಗೆ ಎರಡನೆಯ ಮತ್ತು ಮೂರನೆಯ ಚಿತ್ರಗಳಲ್ಲಿ ಕಾಣುತ್ತಿರುವ ಅಂಗವಿಕಲತೆ ಇಲ್ಲೇ ಇಲ್ವೇನೋ ಎಂಬಂತಿರುವ ಇನ್ನಿಬ್ಬರು ತರುಣರಿಗೆ ಈ ಹುದ್ದೆಗಳು ಲಭಿಸಿವೆ.
ಈಗ ಪ್ರಕಟವಾಗಿರುವುದು ಪ್ರಾವಿಷನಲ್ ಪಟ್ಟಿ. ಈಗಲಾದರೂ ತಾನು ಎಸಗಿರುವ ಅನ್ಯಾಯ ಲೋಕಸೇವಾ ಆಯೋಗಕ್ಕೆ ಅರ್ಥವಾಗಬೇಕು. ಕಣ್ಣಿಗೆ ಎದ್ದು ಕಾಣುವಂತೆ ಎಸಗಿರುವ ಅನ್ಯಾಯ ಸರಿಪಡಿಸಬೇಕು.
ವಿಕಲಚೇತನ ಹೆಸರಿನಲ್ಲೂ ವ್ಯಾಪಾರವನ್ನೇ ಮಾಡಿಕೊಂಡರೆ, ಅದಕ್ಕೆ ಹಗರಣ ಎನ್ನದೇ ಇನ್ನೇನು ಹೇಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.