ಉಪ್ಪಿನಂಗಡಿ: ಶಿರಾಡಿ ಗ್ರಾಮದ ಮಿತ್ತಮಜಲಿನಲ್ಲಿ ಭಾನುವಾರ ಸಂಜೆ ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದ ಪ್ರಯುಕ್ತ ನಕ್ಸಲ್ ನಿಗ್ರಹ ದಳದ (ಎಎನ್ಎಫ್) ಶೋಧ ಕಾರ್ಯಾಚರಣೆ ಬುಧವಾರವೂ ಮುಂದುವರಿಯಿತು.
ನಕ್ಸಲರು ಯಾವ ದಾರಿಯಿಂದ ಮಿತ್ತಮಜಲಿಗೆ ಬಂದರು ಎಂಬ ಜಿಜ್ಞಾಸೆ ಈಗ ಆರಂಭವಾಗಿದ್ದು, ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಶಿರಾಡಿ, ಶಿಶಿಲ, ಶಿಬಾಜೆ ಗ್ರಾಮಗಳಲ್ಲಿ ನಕ್ಸಲರು ಸಂಚರಿಸುವ ಬಗ್ಗೆ ಅನುಮಾನ ಕಾಡತೊಡಗಿದೆ.
ಈ ಗ್ರಾಮಗಳಿಗೆ ತಾಗಿಕೊಂಡು ಶಿಶಿಲ, ಮೀಯಾರು, ಶಿರಾಡಿ ಹೀಗೆ 3 ವಿಭಾಗವಾಗಿ ದಟ್ಟ ಕಾಡು ಆವರಿಸಿ
ಕೊಂಡಿದೆ. ಈ ಗ್ರಾಮಗಳ ಭೇಟಿಗೆ ನಕ್ಸಲರು ಕಾಡಿನಲ್ಲಿ 2 ದಾರಿಯನ್ನು ರಹದಾರಿಯಾಗಿ ಬಳಸಿಕೊಂಡಿರುವ ಅನುಮಾನ ಉಂಟಾಗಿದೆ.
ಕುದುರೆಮುಖ ಕಡೆಯಿಂದ ಕಳಸ, ಸಂಸ, ದಿಡುಪೆ, ನಾರಾವಿ, ಕುತ್ಲೂರು, ಮಲವಂತಿಗೆ, ಲಾಯಿಲ, ಕೊಲ್ಲಿಗಿಲು ಒಂದನೇ ದಾರಿ. ಮೂಡಿಗೆರೆ ಬೈರಾಪುರವಾಗಿ ಕಬ್ಬಿನಾಲೆ ರಕ್ಷಿತಾರಣ್ಯದ ಮೂಲಕ ಕಾಡಿನಲ್ಲಿ ಎತ್ತಿನಭುಜವಾಗಿ ಶಿಶಿಲಕ್ಕೆ ಬರಲು ದಾರಿಯಿದ್ದು, ಇದು ಮಿತ್ತಮಜಲನ್ನು ಸಂಪರ್ಕಿಸುವ ಎರಡನೇ ದಾರಿಯಾಗಿದೆ. ನಕ್ಸಲರು ಭೇಟಿ ನೀಡಿರುವ ಮಿತ್ತಮಜಲು ಶಿರಾಡಿ ಗ್ರಾಮದ ಅಂಚಿನಲ್ಲಿದೆ. ಇಲ್ಲಿ ಬಹುತೇಕ ದಲಿತ ಕುಟುಂಬಗಳು ನೆಲೆಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.