ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಪಟ್ಟಣದ ಹೊರವಲಯದಲ್ಲಿರುವ ಶ್ರೀ ರಾಮದೇವರ ಗುಡ್ಡದ ಬಳಿ ಇರುವ ಪುರಸಭೆ ಕಸ ವಿಲೇವಾರಿ ಘಟಕದಲ್ಲಿ ಕೆಲವು ಹದ್ದು ಮತ್ತು ಗರುಡಗಳು ಮೃತಪಟ್ಟಿವೆ.
ಪಕ್ಷಿಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷ ತ್ಯಾಜ್ಯಗಳ ಸೇವನೆಯಿಂದ ಅವು ಸತ್ತಿರಬಹುದು ಎನ್ನಲಾಗಿದೆ.
‘ಪ್ರಾಣಿಗಳ ನೋವು ನಿವಾರಕಕ್ಕೆ ಡೈಕ್ಲೋಫಿನಿಕ್ ಎಂಬ ಚುಚ್ಚುಮದ್ದನ್ನು ನೀಡಲಾಗುತ್ತದೆ. ಆ ಪ್ರಾಣಿ ಕೆಲದಿನಗಳ ಬಳಿಕ ಮೃತಪಟ್ಟರೆ, ಚುಚ್ಚುಮದ್ದಿನ ಶಕ್ತಿ ಹಾಗೆಯೇ ಉಳಿರುತ್ತದೆ. ಇಂತಹ ಪ್ರಾಣಿಗಳನ್ನು ಪಕ್ಷಿಗಳು ತಿಂದರೆ ಸಾಯುವ ಸಾಧ್ಯತೆ ಹೆಚ್ಚು’ ಎಂದು ಪಕ್ಷಿತಜ್ಞ ಆರ್.ಕೆ.ಮಧು ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಚುಚ್ಚುಮದ್ದಿನಲ್ಲಿರುವ ವಿಷಕಾರಿ ಅಂಶವೇ ಹದ್ದುಗಳು ಮತ್ತು ಗರುಡ ಸಂತತಿ ನಾಶವಾಗುತ್ತಿರಲು ಕಾರಣ. ಈ ಕಾರಣದಿಂದ ಚುಚ್ಚುಮದ್ದನ್ನು ನಿಷೇಧಿಸಲಾಗಿದೆ. ಆದರೂ ಅದು ಇನ್ನೂ ಬಳಕೆಯಲ್ಲಿದೆ ಎಂದರು.
ನಮ್ಮ ಭಾಗದಲ್ಲಿ ಯಾವುದೇ ಹಕ್ಕಿ ಜ್ವರ ಪ್ರಕರಣ ಪತ್ತೆ ಆಗಿಲ್ಲ. ಈ ಹಕ್ಕಿಗಳ ಸಾವಿನ ನೈಜ ಕಾರಣ ತಿಳಿದುಕೊಳ್ಳಲು ಅವುಗಳ ದೇಹದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತ್ಯಾಜ್ಯಗಳನ್ನು ತಿಂದು ಇವುಗಳು ಸಾಯುವುದಿಲ್ಲ, ಇವುಗಳ ಅಹಾರವೇ ತ್ಯಾಜ್ಯ. ಅದನ್ನು ಜೀರ್ಣಿಸಿಕೊಳ್ಳುವಶಕ್ತಿ ಪಕ್ಷಿಗಳಿಗೆ ಇರುತ್ತದೆ. ಇಲ್ಲಿ ಹಕ್ಕಿಗಳನ್ನು ಬೇಟೆಯಾಡಲು ಕೆಲವರು ಬರುತ್ತಾರೆ. ಅವರ ಕೃತ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.