ಹುಬ್ಬಳ್ಳಿ: ಮಲೇಷ್ಯಾದಿಂದ ಮರಳು ಖರೀದಿ ಹೆಸರಲ್ಲಿ ₹ 5800 ಕೋಟಿ ರೂಪಾಯಿ ಲೂಟಿ ನಡೆಯುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಎಸ್ ಐಎಲ್ ನಿಂದ ಪ್ರತಿವರ್ಷ 36 ಲಕ್ಷ ಟನ್ ನಂತೆ ಮೂರು ವರ್ಷದಲ್ಲಿ 180 ಲಕ್ಷ ಟನ್ ಮರಳು ತರಲು ಒಪ್ಪಂದ ಮಾಡಿಕೊಂಡಿದ್ದಾರೆ. ಮೇ 2017ರಲ್ಲಿ ಟೆಂಡರ್ ಕರೆದಿದ್ದಾರೆ.
ಆಸ್ತಿತ್ವದಲ್ಲಿ ಇಲ್ಲದ POSEIDON FZE ಕಂಪನಿಯಿಂದ ಮರಳು ಖರೀದಿ
ಟೆಂಡರ್ ಕರೆದಾಗ POSEIDON FZE ಕಂಪನಿಯೇ ಇರಲಿಲ್ಲ. ಎಂಎಸ್.ಐ.ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಜನರಲ್ ಮ್ಯಾನೇಜರ್ ಮಹಾವೀರ್,ಈ ಅಕ್ರಮದ ರೂವಾರಿಗಳು ಎಂದು ಶೆಟ್ಟರ್ ಟೀಕಿಸಿದರು. ಕಳೆದ ಜೂನ್ 18ರಂದು ಕಂಪನಿ ನೋಂದಣಿಯಾಗಿದೆ.
ನಕಲಿ ಕಂಪನಿಗೆ ಟೆಂಡರ್ ನೀಡಲಾಗಿದೆ. ಅನುಭವವೇ ಇಲ್ಲದ ಕಂಪನಿಗೆ ಟೆಂಡರ್ ಕೊಟ್ಟಿದ್ದರಲ್ಲಿ ಎಂಎಸ್ಐಎಲ್ ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಹಾಗೂ ಮುಖ್ಯಮಂತ್ರಿ ಕಚೇರಿಯ ಐಎಎಸ್ ಅಧಿಕಾರಿಗಳ ನೇರ ಕೈವಾಡವಿದೆ.
ಕೂಡಲೇ ಸಿದ್ದರಾಮಯ್ಯ ಅವರು ಈ ಹಗರಣದ ತನಿಖೆಯನ್ನು ಸಿಬಿಐ ಅಥವಾ ಜಾರಿ ನಿರ್ದೆಶನಾಲಯಕ್ಕೆ ವಹಿಸಬೇಕು. ಇಲ್ಲದಿದ್ದರೆ ಇದಕ್ಕೆ ಮುಖ್ಯಮಂತ್ರಿ ಅವರ ಸಮ್ಮತಿಯೂ ಇದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದರು.
ಕಂಪನಿ ಖೊಟ್ಟಿ ಅಡ್ರೆಸ್ ನೀಡಿ ಟೆಂಡರ್ ಪಡೆಯಲಾಗಿದೆ ಇದರಲ್ಲಿ ಸಾವಿರ ಕೋಟಿ ಲೂಟಿ ಮಾಡುತ್ತಿದ್ದಾರೆ. ಗುತ್ತಿಗೆ ಪಡೆಯಲು ಸಿಂಗಾಪುರ ಬ್ಯಾಂಕ್ ನಿಂದ ಇಎಂಡಿ ಗ್ಯಾರಂಟಿ ನೀಡಲಾಗಿದೆ. ಆದರೆ ವಾಸ್ತವದಲ್ಲಿ ಆ ಬ್ಯಾಂಕ್ ಸಿಂಗಪುರದಲ್ಲೇ ಇಲ್ಲ. ₹ 5 ಸಾವಿರ ಕೋಟಿ ಹಣವನ್ನ ಲೂಟಿ ಮಾಡಲು ಹೊರಟಿದ್ದಾರೆ. ಅತ್ಯಂತ ಕಡಿಮೆ ಬೆಲೆಗೆ ತಮಿಳುನಾಡು, ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳುತ್ತಿದೆ.
ಆದರೆ ರಾಜ್ಯ ಸರ್ಕಾರ ₹ 2300 ರೂಪಾಯಿ ಒಂದು ಟನ್ ಖರೀದಿಸಿ ಚೀಲಕ್ಕೆ ತುಂಬಲು ₹ 1100 ರೂಪಾಯಿ ನೀಡಿ ಒಟ್ಟು ₹ 3400ಕ್ಕೆ ಒಂದು ಟನ್ ಮರಳು ಖರೀದಿಸಲಾಗುತ್ತಿದೆ. ಆ ಮೂಲಕ ₹ 5800 ಕೋಟಿ ಲೂಟಿ ಮಾಡಿದೆ. ಚುನಾವಣೆಗೆ ಹಣ ಹೊಂದಿಸಲು, ಕೇಂದ್ರದ ಕಾಂಗ್ರೆಸ್ ಹೈ ಕಮಾಂಡ್ ನೀಡಲು ಈ ಲೂಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು
ಇದು ಮರಳು ಭಾಗ್ಯವಲ್ಲ ಲೂಟಿ ಭಾಗ್ಯ ಎಂದು ಶೆಟ್ಟರ್ ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.