ರಾಮನಗರ: ಹಣಕ್ಕಾಗಿ ಮಗಳನ್ನೇ ಕೊಲೆ ಮಾಡಿದ ತಂದೆ ಹಾಗೂ ಇತರ ಮೂವರು ಆರೋಪಿಗಳನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ನಿವಾಸಿ ಚಿಕ್ಕಬ್ಯಾಟಪ್ಪ ಅಲಿಯಾಸ್ ಸಂಪಂಗಿ ಹಾಗೂ ಅವರ ಸಹವರ್ತಿಗಳಾದ ಲಕ್ಷ್ಮಿ, ಇಸ್ಮಾಯಿಲ್ ಖಾನ್ ಹಾಗೂ ಮುನಿರಾಜು ಬಂಧಿತರು. ಚಿಕ್ಕಬ್ಯಾಟಪ್ಪ ಅವರ ಪುತ್ರಿ ವೀಣಾ (24) ಕೊಲೆಯಾದವರು.
ವೀಣಾ ಅವರನ್ನು ರಾಮನಗರದ ಪಾರ್ಥ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಅವರಿಗೆ ನಾಲ್ಕು ತಿಂಗಳ ಮಗು ಇದ್ದು, ಬಾಣಂತನಕ್ಕೆಂದು ಆಕೆ ತಾಯಿ ಮನೆಗೆ ಬಂದಿದ್ದರು.
ಚಿಕ್ಕಬ್ಯಾಟಪ್ಪ ಎರಡು ಕೋಟಿ ರೂಪಾಯಿಗೆ ಜಮೀನು ಮಾರಾಟ ಮಾಡಿದ್ದು, ಒಂದು ಕೋಟಿ ರೂಪಾಯಿಯನ್ನು ಮಗಳಿಗೆ ನೀಡಿದ್ದರು. ಉಳಿದ ಒಂದು ಕೋಟಿ ರೂಪಾಯಿಯನ್ನು ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಲಕ್ಷ್ಮಿಗೆ ನೀಡಿದ್ದರು. ಲಕ್ಷ್ಮಿ ಬಳಿಯ ಹಣ ಖರ್ಚಾಗಿದ್ದು, wwಆಕೆ ಇನ್ನಷ್ಟು ಹಣ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ರಾಮನಗರ ಎಸ್ಪಿ ಬಿ. ರಮೇಶ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚಿಕ್ಕಬ್ಯಾಟಪ್ಪ, ಮೂವರು ಆರೋಪಿಗಳೊಡನೆ ಸೇರಿ ಇದೇ ತಿಂಗಳ 11ರಂದು ಮನೆಯಲ್ಲಿ ಮಗಳಿಗೆ ವಿಷ ಉಣಿಸಿ ಹಾಗೂ ಇಂಜೆಕ್ಷನ್ ನೀಡಿ ಕೊಂದಿದ್ದರು. ಬಳಿಕ ಪ್ರಕರಣವನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಿಲು ಯತ್ನಿಸಿದ್ದರು ಎಂದರು.
ಕಗ್ಗಲೀಪುರ ಪೊಲೀ ಸರು ತನಿಖೆ ಕೈಗೊಂಡಾಗ ಅದು ಬಹಿರಂಗವಾಗಿದೆ ಎಂದು ವಿವರಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.