ADVERTISEMENT

ಕೆಎನ್‌ಎನ್‌ ಎಇಇ ಬಳಿ 8 ನಿವೇಶನ, 2 ಮನೆ!

ಭ್ರಷ್ಟಾಚಾರ ನಿಗ್ರಹ ದಳದ ದಾಳಿ ವೇಳೆ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 12:39 IST
Last Updated 6 ಜುಲೈ 2018, 12:39 IST
   

ಬೆಂಗಳೂರು: ಸವದತ್ತಿಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ನೀರಾವರಿ ನಿಗಮದ (ಕೆಎನ್‌ಎನ್‌) ವಿದ್ಯುತ್‌ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಲಿಂಗಪ್ಪ ಬಸಪ್ಪ ಹಡಗಲಿ ಅವರು ವಿವಿಧ ಕಡೆ 8 ನಿವೇಶನ ಹಾಗೂ 2 ಮನೆಗಳನ್ನು ಹೊಂದಿರುವುದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದಾಳಿ ವೇಳೆ ಪತ್ತೆಯಾಗಿದೆ.

ಶಿವಲಿಂಗಪ್ಪ ತಮ್ಮ ಆದಾಯ ಮೀರಿ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಆಧರಿಸಿ ಎಸಿಬಿ ಪೊಲೀಸರು ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ಸ್ಥಿರ ಮತ್ತು ಚರಾಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಗಲಕೋಟೆ ನವನಗರದಲ್ಲಿ ಒಂದು ಮನೆ, ಒಂದು ನಿವೇಶನ; ಯರಗಟ್ಟಿ ಗ್ರಾಮದಲ್ಲಿ ಒಂದು ಮನೆ; ನಾಲ್ಕು ನಿವೇಶನ; ಮುಟಗಾ, ಬೈಲಹೊಂಗಲ ಹಾಗೂ ಬಸವನ ಕುಡಚಿ ಗ್ರಾಮದಲ್ಲಿ ಒಂದು ನಿವೇಶನ, ಸವದತ್ತಿಯ ವಿವಿಧ ಸರ್ವೆ ನಂಬರ್‌ಗಳಲ್ಲಿ 38 ಎಕರೆ ಜಮೀನು ಹೊಂದಿದ್ದಾರೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಲ್ಲದೆ, ಒಂದು ಮಹೀಂದ್ರಾ ಟಿಯುವಿ ಜೀಪು, ಎರಡು ದ್ವಿಚಕ್ರ ವಾಹನ, 275 ಗ್ರಾಂ ಚಿನ್ನ, 832 ಗ್ರಾಂ ಬೆಳ್ಳಿ, ಮನೆಯಲ್ಲಿ ₹ 55000 ನಗದು, ಬ್ಯಾಂಕಿನಲ್ಲಿ ₹ 40 ಲಕ್ಷ ಠೇವಣಿ, ಎರಡು ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳನ್ನು ಹೊಂದಿರುವುದಾಗಿ ಎಸಿಬಿ ಮಾಹಿತಿ ನೀಡಿದೆ.

ಶಿವಲಿಂಗಪ್ಪ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.